Tuesday, April 14, 2026
Tuesday, April 14, 2026

ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು: ಗೋಶಾಲೆಗೆ ಎರಡು ಲಕ್ಷದ ಮೂವತ್ತು ಸಾವಿರ ರುಪಾಯಿ ದೇಣಿಗೆ

ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು: ಗೋಶಾಲೆಗೆ ಎರಡು ಲಕ್ಷದ ಮೂವತ್ತು ಸಾವಿರ ರುಪಾಯಿ ದೇಣಿಗೆ

Date:

ಬ್ರಹ್ಮಾವರ, ಫೆ.2: ಬ್ರಹ್ಮಾವರದ ನಂಚಾರಿನಲ್ಲಿರುವ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನ ಗೋಶಾಲೆಗೆ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಇವರ ಆಯೋಜನೆಯಲ್ಲಿ ಭಾನುವಾರ ಮೈರ್ ಕೊಮೆಯ ಸಪ್ತಪದಿ ಕನ್ವೆನಷನ್ ಹಾಲ್ ನಲ್ಲಿ ಶುಭಾಶಯ ಜೈನ್ ವಿರಚಿತ ಹನುಮ ಕಲ್ಯಾಣ ಎಂಬ ಪೌರಾಣಿಕ ಪ್ರದರ್ಶನ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಗೋಶಾಲೆಯ ಮುಖ್ಯಸ್ಥರಿಗೆ ಕಾರ್ಯಕ್ರಮದಿಂದ ಸಂಗ್ರಹವಾದ ಒಂದು ಲಕ್ಷ ರುಪಾಯಿ ಮೊತ್ತದ ದೇಣಿಗೆಯನ್ನು ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಉಳಿದ ಒಂದು ಲಕ್ಷದ ಮೂವತ್ತು ಸಾವಿರ ರುಪಾಯಿಗಳ ಮೊತ್ತವನ್ನೂ ಗೋಶಾಲೆಗೆ ಹಸ್ತಾಂತರಿಸುವ ಕುರಿತು ಟ್ರಸ್ಟ್ ಅಧ್ಯಕ್ಷ ಗೋವಿಂದ ವಂಡಾರು ಘೋಷಣೆ ಮಾಡಿದರು.

ದೇಣಿಗೆಯನ್ನು ಸ್ವೀಕರಿಸಿ ಮಾತನಾಡಿದ ನಂಚಾರು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನ ಮುಖ್ಯಸ್ಥರಾದ ರಾಜೇಂದ್ರ ಚಕ್ಕೇರವರು, ಅನಾಥ ಗೋವುಗಳ ಸೇವೆಯಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡಿರುವ ನಂಚಾರು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನ ನೆರವಿಗೆ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ನಿಂತಿರುವುದು ಬಹಳ ಸಂತಸದ ವಿಚಾರ. ಯಕ್ಷಗಾನ ಕಲಾವಿದರಾಗಿ ಗೋವಿಂದ ವಂಡಾರು ಅವರು ತಮ್ಮ ಟ್ರಸ್ಟ್ ನ ಮುಖಾಂತರ ಗೋವುಗಳ ಪೋಷಣೆ ಹಾಗೂ ರಕ್ಷಣೆಯ ಮಹತ್ತರವಾದ ಉದ್ದೇಶಕ್ಕೆ ಮನ ಮಾಡಿರುವುದರಿಂದ ನಿಜಕ್ಕೂ ಅಭಿನಂದನಾರ್ಹ ಎಂದು ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗೋಶಾಲಾ ಟ್ರಸ್ಟ್ ನ ಮುಖ್ಯಸ್ಥರಾದ ರಾಜೇಂದ್ರ ಚಕ್ಕೇರವರಿಗೆ ಶಾಲು ಹೊದೆಸಿ ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಗೋವಿಂದ ವಂಡಾರು ಕಳೆದ ಕೆಲವು ವರ್ಷಗಳಿಂದ ನಮ್ಮದೇ ಊರಿನ ಗೋಶಾಲೆಯ ಜಲಸಂಪರ್ಕಕ್ಕಾಗಿ ವ್ಯವಸ್ಥೆ ಕಲ್ಪಿಸಬೇಕೆಂಬ ಕನಸು ನನ್ನದಾಗಿತ್ತು. ಯಕ್ಷಗಾನ ಕಲಾವಿದನಾಗಿ ಕಲೆಯಿಂದ ಬದುಕು ಗೌರವ ಮನ್ನಣೆ ಎಲ್ಲವನ್ನೂ ಪಡೆದುಕೊಂಡಿದ್ದೇನೆ. ಅದೇ ಕಲೆಯ ಮೂಲಕ ಇಂದು ಈ ರೀತಿಯಾಗಿ ಗೋಮಾತೆಗೆ ಸೇವೆ ಸಲ್ಲಿಸಲು ಅವಕಾಶ ದೊರಕಿರುವುದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಈ ಪುಣ್ಯದ ಕಾರ್ಯಕ್ಕೆ ಒಂದೊಂದು ರುಪಾಯಿಯೂ ದೇಣಿಗೆ ನೀಡಿದ ಪ್ರತಿಯೊಬ್ಬರಿಗೂ ಆ ಪುಣ್ಯ ಲಭಿಸುತ್ತದೆ ಅವರೆಲ್ಲರಿಗೂ ಗೋಮಾತೆ ಹಾಗೂ ಮಂದಾರ್ತಿ ಮಾತೆ ಒಳಿತು ಮಾಡಲಿ. ಈ ಪುಣ್ಯದ ಕೆಲಸದಲ್ಲಿ ನನ್ನೊಂದಿಗೆ ಭಾಗಿಯಾದ ಟ್ರಸ್ಟ್ ನ ಕಾರ್ಯಕರ್ತರಿಗೂ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ ಎಂದರು.

ಕುಂದಾಪುರ ಕನ್ನಡದ ರಾಯಭಾರಿ ಮನು ಹಂದಾಡಿ ಮಾತನಾಡಿ, ಗೋವುಗಳನ್ನು ಪೋಷಣೆ ಮಾಡುವಲ್ಲಿ ಪ್ರತಿಯೊಬ್ಬರೂ ಕೈಲಾದ ಸಹಾಯವನ್ನು ಮಾಡುವುದು ಅಗತ್ಯ. ಗೋಪೂಜೆ ಹಬ್ಬಕ್ಕೆ ಮನೆಯಲ್ಲಿ ಮಾಡುವುದಷ್ಟೆ ಅಲ್ಲ. ನಿಜವಾದ ಪೂಜೆ ಎಂದರೆ ವರ್ಷಕ್ಕೊಮ್ಮೆಯಾದರೂ ಹತ್ತಿರದ ಗೋಶಾಲೆಗೆ ಹೋಗಿ ಅಲ್ಲಿರುವ ಗೋವುಗಳಿಗೆ ತನ್ನ ಕೈಲಾದಷ್ಟು ಸಹಾಯ ಮಾಡುವುದು ಶ್ರೇಷ್ಠ ಕೆಲಸ. ಕೃಷಿಕರಾದವರು ತಮ್ಮ ಹೊಲದಲ್ಲಿ ಬೆಳೆದ ಒಣ ಹುಲ್ಲು ಇತರ ವಸ್ತುಗಳನ್ನು ಗೋಶಾಲೆಗೆ ದಾನ ನೀಡುವುದರಿಂದ ಗೋಶಾಲೆಗೆ ಸಹಾಯವಾಗುವುದರೊಂದಿಗೆ ಅದರ ಫಲವೂ ನಮಗೆ ಸಿಗುತ್ತದೆ ಎಂದರು. ಕಲಾವಿದರಾಗಿ ವಂಡಾರು ಮಾಡಿರುವ ಈ ಸೇವೆ ನಿಜಕ್ಕೂ ಶ್ಲಾಘನೀಯ. ಇದು ಮುಂದಿನ ಯುವಪೀಳಿಗೆಗೆ ಒಂದು ಮಾದರಿ ಎಂದರು.

ಗೋಶಾಲಾ ಟ್ರಸ್ಟ್ ನ ಜಲಸಂಪರ್ಕದ ಉದ್ದೇಶಕ್ಕೆ ಎರಡು ಲಕ್ಷದ ಮೂವತ್ತು ಸಾವಿರ ರುಪಾಯಿ ದೇಣಿಗೆ ನೀಡಿದ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷರಾದ ಗೋವಿಂದ ವಂಡಾರು ಅವರನ್ನು ನಂಚಾರು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನ ಹಾಗೂ ಊರ ಗಣ್ಯರ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ವೇದಿಕೆ ವ್ಯವಸ್ಥೆಯನ್ನು ಪ್ರತಾಪ್ ಹೆಗ್ಡೆ ಮಾರಾಳಿ, ಕರಪತ್ರ ಹಾಗೂ ಪ್ರಚಾರ ಫಲಕಗಳ ವ್ಯವಸ್ಥೆಯನ್ನು ಸುಧೀರ್ ಅಮೀನ್ ಕೊಕ್ಕರ್ಣೆ, ಪ್ರಚಾರದ ವ್ಯವಸ್ಥೆಯನ್ನು ನಾಗರಾಜ್ ಕುಲಾಲ್, ಊಟದ ವ್ಯವಸ್ಥೆಯನ್ನು ಮೈರ್ ಕೊಮೆಯ ಹೋಟೆಲ್ ಮಂದರತಿ ಇದರ ಗುಣವತಿ ಚಂದ್ರಶೇಖರ್ ಒದಗಿಸಿ ನೆರವು ನೀಡಿದರು.

ವೇದಿಕೆಯಲ್ಲಿ ಶ್ರೀ ಕ್ಷೇತ್ರ ಮಂದಾರ್ತಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಧನಂಜಯ ಶೆಟ್ಟಿ, ಯಕ್ಷ ಪೋಷಕರಾದ ಚೋರಾಡಿಯ ರಾಜೀವ ಶೆಟ್ಟಿ, ಕೊಕ್ಕರ್ಣೆ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ವಂಡಾರು, ನಂಚಾರು ಗೋಶಾಲೆಯ ಸ್ಥಾಪಕಾಧ್ಯಕ್ಷರಾದ ರಾಜೇಂದ್ರ ಚಕ್ಕೇರ, ಕುಂದಾಪುರ ಕನ್ನಡದ ರಾಯಭಾರಿ ಮನು ಹಂದಾಡಿ, ಯಕ್ಷಗಾನ ಪೋಷಕರಾದ ಆಂಡ್ರೂ ಡಿ ಸಿಲ್ವ, ಕೊಕ್ಕರ್ಣೆಯ ಹಳ್ಳಿ ಗೋಪಾಲಕೃಷ್ಣ ಮಠದ ರಾಮಚಂದ್ರ ಶಾಸ್ತ್ರಿ, ಪ್ರಸಂಗಕರ್ತೆ ಶುಭಾಶಯ ಜೈನ್ ಮತ್ತಿತರರು ಉಪಸ್ಥಿತರಿದ್ದರು. ಅಧ್ಯಾಪಕರಾದ ಶಶಿಧರ್ ಶೆಟ್ಟಿ ನಂಚಾರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮುದ್ದಣ್ಣನಗರ: ಸ್ವಚ್ಛತಾ ಅಭಿಯಾನ

ಕಾರ್ಕಳ, ಏ.14: ಶ್ರೀ ಧರ್ಮರಸು ಕೊಡಮನಣಿತ್ತಾಯಿ ಕುಕ್ಕಿನಂತಾಯ ದೈವಸ್ಥಾನ ಬ್ರಹ್ಮ ಬೈದರ್ಕಳ...

ಮಧ್ಯಪ್ರವೇಶಿಸಬೇಡಿ: ಹಾರ್ಮುಜ್ ದಿಗ್ಬಂಧನದ ಬಗ್ಗೆ ಅಮೆರಿಕಾಗೆ ಚೀನಾ ಎಚ್ಚರಿಕೆ

ಯು.ಬಿ.ಎನ್.ಡಿ., ಏ.14: ಚೀನಾದ ಹಿರಿಯ ಅಧಿಕಾರಿಯೊಬ್ಬರು ಹಾರ್ಮುಜ್ ಜಲಸಂಧಿಯ ಮೇಲೆ ದಿಗ್ಬಂಧನ...

ಬಾಳೆಬರೆ ಘಾಟಿಯಲ್ಲಿ ವಾಹನ ಸಂಚಾರ ನಿಷೇಧ

ಉಡುಪಿ, ಏ.14: ಬಾಳೆಬರೇ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟಿಯಲ್ಲಿ...
error: Content is protected !!