Home ಸಂಸ್ಕೃತಿ ಹಳ್ಳಿಹೊಳೆ: ದುಂಡುಕಲ್ಲಿನಲ್ಲಿ ಅರಳಿದ ಕಲಾಕೃತಿ

ಹಳ್ಳಿಹೊಳೆ: ದುಂಡುಕಲ್ಲಿನಲ್ಲಿ ಅರಳಿದ ಕಲಾಕೃತಿ

1459
0

ಉಡುಪಿ: ಚೇತನ್ ಕುಮಾರ್ ಹಳ್ಳಿಹೊಳೆ, ಈ ಹೆಸರು ಕೇಳಿದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಕಪ್ಪೆ ಮತ್ತು ಕಡವೆ. ಇದೇನಿದು? ಹಳ್ಳಿಹೊಳೆ-ಕೊಲ್ಲೂರು ರಸ್ತೆಯ ಬದಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಂಡೂಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಅದೇ ರೀತಿ ಕಡವೆಯ ಕಲಾಕೃತಿ ಕೂಡ ಅಪಾರ ಜನಮನ್ನಣೆ ಗಳಿಸಿದೆ. ಇದನ್ನು ನಿರ್ಮಿಸಿದವರೇ ಯುವ ಕಲಾವಿದ ಚೇತನ್ ಕುಮಾರ್ ಹಳ್ಳಿಹೊಳೆ.

ಇದೀಗ ಇವರು ಹಳ್ಳಿಹೊಳೆಯ ಅನಂತಮೂರ್ತಿಯವರ ಮನೆಯ ಗೇಟ್ ಬಳಿ ದುಂಡುಕಲ್ಲಿನಲ್ಲಿ ಮನೆಗೆ ಬರುವ ಅತಿಥಿಗಳನ್ನು ಸ್ವಾಗತಿಸುವ ಭಂಗಿಯಲ್ಲಿರುವ ಎರಡು ಆಕರ್ಷಕ ಕಲಾಕೃತಿಗಳನ್ನು ರಚಿಸಿದ್ದಾರೆ.

’ಉಡುಪಿ ಬುಲೆಟಿನ್’ ಜೊತೆಗೆ ತಮ್ಮ ಕಲಾರಾಧನೆಯ ಕುರಿತು ಚೇತನ್ ಮಾತನಾಡಿದ್ದಾರೆ. ನನಗೆ ಚಿತ್ರಕಲೆಯಲ್ಲಿ ಚಿಕ್ಕಂದಿನಿಂದಲೂ ತುಂಬ ಆಸಕ್ತಿ ಇದ್ದು, ಪ್ರಾಥಮಿಕ ಶಿಕ್ಷಣದಲ್ಲಿ ಪುಸ್ತಕದಲ್ಲಿರುವ ಚಿತ್ರಗಳನ್ನು ನೋಡಿ ಇನ್ನೊಂದು ಚಿತ್ರ ಕೈಯಿಂದ ರಚಿತವಾಗಿ ಖುಷಿಯಾಗಿ ಆಸಕ್ತಿಯೂ ಹೆಚ್ಚಾಗುತ್ತಿತ್ತು ಎಂದಿದ್ದಾರೆ.

ಐದು ವರ್ಷಗಳಿಂದ ಕಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇವರು ಅದ್ಭುತವಾದ ಕಲಾಕೃತಿಗಳನ್ನು ರಚಿಸಿ ಜನಮನ್ನಣೆಗಳಿಸಿದ್ದಾರೆ. ಚಿತ್ತಾರ ಹಳ್ಳಿಹೊಳೆ ಎಂಬ ಕಲಾ ತಂಡವನ್ನು ಕಟ್ಟಿಕೊಂಡಿರುವ ಇವರು ಇದರ ಮೂಲಕವೇ ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲಾ ಆರಾಧನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ತಂಡದಲ್ಲಿ ೫-೬ ಮಂದಿ ಇದ್ದು ಹೆಚ್ಚಿನ ಕೆಲಸಗಳಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆಯ ಕಲಾವಿದರು ಕೂಡ ತಂಡದಲ್ಲಿ ಸೇರ್ಪಡೆಯಾಗಿ ಬಂದಿರುವ ಆರ್ಡರ್ ಗಳನ್ನು ಕ್ಲಪ್ತ ಸಮಯದಲ್ಲಿ ಮುಗಿಸುತ್ತಾರೆ.

ಹಳೆಯ ವಸ್ತುಗಳಿಗೆ ಹೊಸ ಮೆರುಗು ಕೊಡುವಲ್ಲಿ ಇವರು ನಿಸ್ಸೀಮರು. ಹಳೆಯ ವಸ್ತು ಯಾವ ಆಕಾರದಲ್ಲಿದೆ ಎಂಬುದನ್ನು ತಿಳಿದು ಅದಕ್ಕೆ ಸಂಬಂಧಪಟ್ಟ ಸ್ಕೆಚ್ ಹಾಕುವ ಮೂಲಕ ಆ ವಸ್ತುಗಳಿಗೆ ರೂಪವನ್ನು ನೀಡುತ್ತೇನೆ ಎಂದಿದ್ದಾರೆ. ಇಷ್ಟು ಮಾತ್ರವಲ್ಲದೇ ಶಾಲೆಯ ಆವರಣ ಗೋಡೆಗಳಲ್ಲಿ ವರ್ಲಿ ಆರ್ಟ್, ಕಾರ್ಟೂನ್ ಆರ್ಟ್, ರಿಯಲಿಸ್ಟಿಕ್ ಪೈಂಟಿಂಗ್ ಸೇರಿದಂತೆ ಹಲವಾರು ಚಿತ್ರಗಳನ್ನು ಇವರ ತಂಡ ರಚಿಸಿದೆ. ಇಂತಹ ಕಲಾಕೃತಿಗಳನ್ನು ರಚಿಸಲು ಇವರ ತಂಡವನ್ನೇ ಹುಡುಕಿಕೊಂಡು ಅನೇಕ ಶಾಲಾ ಕಾಲೇಜುಗಳು ಮತ್ತು ಸಂಘ ಸಂಸ್ಥೆಗಳು ಬರುತ್ತಿರುವುದು ಇವರ ಕಲಾಬದ್ಧತೆ ಮತ್ತು ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ರಸ್ತೆಯಲ್ಲಿ ೩ಡಿ ಪೈಂಟಿಂಗ್ ಮೂಲಕ ಜನಜಾಗೃತಿ ಮೂಡಿಸಿರುವ ಚೇತನ್ ಕುಮಾರ್ ಹಳ್ಳಿಹೊಳೆಯವರ ತಂಡವು ಕಲಾ ಆರಾಧನೆಯಲ್ಲಿಯೂ ಸಾಮಾಜಿಕ ಕಳಕಳಿಯನ್ನು ಕೂಡ ಅನಾವರಣಗೊಳಿಸಿದೆ. ಡಿಜಿಟಲ್ ಯುಗದಲ್ಲಿ ಕಲಾವಿದರಿಗೆ ಒಳ್ಳೆಯ ಬೇಡಿಕೆಯಿದೆ. ಕಲೆಯಲ್ಲಿ ಕಲಾವಿದರ ಶ್ರಮ, ಆಲೋಚನೆ, ತಾಳ್ಮೆ, ಕಲಾಕೌಶಲ್ಯ ಎಲ್ಲಕ್ಕಿಂತ ವಿಭಿನ್ನವಾಗಿದೆ ಎಂದು ಚೇತನ್ ಅಭಿಪ್ರಾಯಪಡುತ್ತಾರೆ. ಕಳೆದ ವರ್ಷದ ಲಾಕ್ ಡೌನ್ ಮತ್ತು ಪ್ರಸಕ್ತ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ ಕೂಡ ಚೇತನ್ ಕುಮಾರ್ ಸಮಯದ ಸದ್ಬಳಕೆಯನ್ನು ಮಾಡಿ ಅತ್ಯಾಕರ್ಷಕ ಕಲಾಕೃತಿಗಳನ್ನು ತನ್ನಲ್ಲಿರುವ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಮಿಶ್ರಣಗೊಳಿಸಿ ನಿರ್ಮಿಸಿದ್ದಾರೆ.

ಕಲಾ ಜೀವನದಲ್ಲಿ ನಮಗಿಂತ ಎತ್ತರದಲ್ಲಿರುವವರ ಜೊತೆ ಕಲಿತರೆ ನಾವು ಅವರ ಅರ್ಧದಷ್ಟಾದರೂ ಗುರಿಯನ್ನು ತಲುಪಬಹುದು. ಕಲಾ ಜ್ಞಾನವನ್ನು ಪಡೆಯಲು ಎಷ್ಟು ಸಮಯವನ್ನು ಕಳೆಯುತ್ತೇವೆಯೋ ಅಷ್ಟೇ ಸುಂದರವಾದ ಕಲಾಕೃತಿಯನ್ನು ರಚಿಸಲು ಸಾಧ್ಯವಾಗುತ್ತದೆ. ಕೆಲವು ಕಲಾಕೃತಿ ರಚಿಸಲು ಹಲವು ದಿನಗಳನ್ನು ತೆಗೆದುಕೊಳ್ಳುತ್ತೇವೆ. ನಮಗೆ ತಾಳ್ಮೆ ಬಹುಮುಖ್ಯ. ಯಾವುದೇ ಕಲಾಕೃತಿ ಮಾಡಿದರೂ ಅದರಲ್ಲಿ ಏನಾದರೂ ಹೊಸತನವನ್ನು ಕಲಿಯಬೇಕು ಎಂದು ಚೇತನ್ ಅಭಿಪ್ರಾಯಪಟ್ಟಿದ್ದಾರೆ.

ಚಂದ್ರ ಫೌಂಡೇಶನ್‌ ಚಂಡೀಗಢ ಆಯೋಜಿಸಿದ್ದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಫರ್ಧೆಯಲ್ಲಿ ಚೇತನ್‌ ಕುಮಾರ್‌ ಹಳ್ಳಿಹೊಳೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಳ್ಳಿಹೊಳೆಯ ಚಂದ್ರಶೇಖರ್‌ ನಾಯ್ಕ್ ಮತ್ತು ರತ್ನಾ ದಂಪತಿಗಳ ಪುತ್ರ ಚೇತನ್ ಕುಮಾರ್ ಮೂಡುಬಿದಿರೆಯ ಆಳ್ವಾಸ್‌ ವಿದ್ಯಾಸಂಸ್ಥೆಯ ದೃಶ್ಯ ಕಲಾ ವಿಭಾಗದಲ್ಲಿ ಅಧ್ಯಯನ ಮಾಡಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.