ಉಡುಪಿ, ಜು.23: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಬಿ.ಎ, ಬಿ.ಎಸ್ ಡಬ್ಲ್ಯು, ಬಿ.ಕಾಂ, ಬಿಬಿಎ. ಬಿಸಿಎ, ಬಿ. ಎಸ್. ಸಿ, ಪದವಿಗಳಿಗೆ ಪ್ರವೇಶಾತಿ ಪಡೆದ 20೦ಕ್ಕೂ ಹೆಚ್ಚು ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬಾರ್ಕೂರು ಸರಕಾರಿ ಪದವಿ ಕಾಲೇಜು ಇಲ್ಲಿನ ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಡಾ. ಪ್ರಸಾದ್ ರಾವ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸುಂದರ ಮತ್ತು ಅರ್ಥಪೂರ್ಣ ಬದುಕಿನ ಬುನಾದಿಯೇ ಉನ್ನತ ಶಿಕ್ಷಣ. ಉನ್ನತ ಶಿಕ್ಷಣ ಪಡೆಯುವ ಸಂದರ್ಭ ಅಗತ್ಯ ಜ್ಞಾನ, ಕೌಶಲ್ಯಗಳು, ವೃತ್ತಿ ಬದುಕಿನ ಕಲ್ಪನೆಗಳನ್ನಿಟ್ಟುಕೊಂಡು ಕ್ರಿಯಾಶೀಲರಾಗಬೇಕು. ಕಾಲೇಜಿನಲ್ಲಿ ಸಿಗುವ ಹಾಗೂ ಸರಕಾರದಿಂದ ದೊರಕುವ ಸಕಲ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದರ ಜೊತೆಗೆ ಪೌರತ್ವದ ಜವಾಬ್ದಾರಿಗಳನ್ನು ನಿರ್ವಹಿಸುವ ಉತ್ತಮ ನಾಗರಿಕರಾಗಬೇಕು ಎಂದರು. ವಿಶ್ವವಿದ್ಯಾನಿಲಯದ ನಿಯಮಗಳ ಕುರಿತಾಗಿಯೂ ಮಾಹಿತಿ ನೀಡಿದರು.
ಐಕ್ಯೂಎಸಿ ಸಂಚಾಲಕರಾದ ಡಾ. ವಿಷ್ಣುಮೂರ್ತಿ ಪ್ರಭು ಉನ್ನತ ಶಿಕ್ಷಣದಲ್ಲಿ ಅಗತ್ಯವಿರುವ ವಿಮರ್ಶಾತ್ಮಕ ಹಾಗೂ ವಿಶ್ಲೇಷಣಾತ್ಮಕ ದೃಷ್ಟಿಕೋನದ ಅಗತ್ಯತೆಗಳನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವ್ಕರ್ ಅಧ್ಯಯನದ ಜೊತೆಗೆ ಶಿಸ್ತು ಬದ್ಧ ಮತ್ತು ಆರೋಗ್ಯ ಪೂರ್ಣ ದಿನಚರಣೆಯ ಅವಶ್ಯಕತೆಗಳನ್ನು ತಿಳಿಸಿದರು. ಶೈಕ್ಷಣಿಕ ಸಲಹೆಗಾರರಾದ ಡಾ.ಶ್ರೀಧರ್ ಭಟ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ರಾಜಕುಮಾರ್, ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ, ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಬಿಂದು.ಟಿ, ಹಾಗೂ ಬೋಧಕ -ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರೆ ಸಂಖ್ಯಾಶಾಸ್ತ್ರ ಸಹಪ್ರಾಧ್ಯಾಪಕರಾದ ಉಮೇಶ್ ಪೈ ವಂದಿಸಿದರು. ರಾಜ್ಯಶಾಸ್ತ್ರ ಸಹಪ್ರಾಧ್ಯಾಪಕರಾದ ಪ್ರಶಾಂತ್ ನೀಲಾವರ ಕಾರ್ಯಕ್ರಮ ನಿರೂಪಿಸಿದರು.




By
ForthFocus™