ಉಡುಪಿ, ಜೂ.14: ಆಗುಂಬೆ ಘಾಟಿಯಲ್ಲಿ ವಾಹನಗಳ ಒತ್ತಡದಿಂದ ಟ್ರಾಫಿಕ್ ಜಾಮ್, ಕೆಲವು ತಿರುವಿನ ದಂಡೆಗಳ ಕುಸಿತದ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜೊತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗುಂಬೆ ಘಾಟಿಯ ತಿರುವುಗಳ ವೀಕ್ಷಣೆ ನಡೆಸಿದರು.
ಸನಿಹದ ಹುಲಿಕಲ್ ಘಾಟಿಯಲ್ಲಿ ವಾಹನ ನಿರ್ಬಂಧವಿದ್ದುದರಿಂದ ಆಗುಂಬೆ ಘಾಟಿಯಲ್ಲಿ ಅತಿಯಾದ ವಾಹನ ದಟ್ಟಣೆ ಇರುವುದು ಮತ್ತು ನಿರ್ಬಂಧವಿದ್ದರೂ ಜಲ್ಲಿಕಲ್ಲು ಮತ್ತು ಬಾರಿ ತೂಕದ ವಾಹನಗಳ ಚಲಿಸುವಿಕೆಯಿಂದ ಭೂಕುಸಿತದ ಸಂಭವವಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತಾಗಿ ತಿರುವಿನ ದಂಡೆಗಳಲ್ಲಿ ಸಾವಿರ ಮೀಟರ್ ತಡೆಬೇಲಿ ನಿರ್ಮಿಸಲು ಸೂಚಿಸಲಾಗಿದೆ. ತಿರುವುಗಳ ಕುಸಿತ ಮತ್ತು ಘಾಟಿ ರಸ್ತೆ ದುರಸ್ತಿಗೆ ಕೇಂದ್ರ ಸರ್ಕಾರಕ್ಕೆ 15 ಕೋಟಿ ರೂಪಾಯಿ ಕಾಮಗಾರಿ ಪ್ರಸ್ತಾಪನೆಗೆ ಮಂಜೂರಾತಿ ದೊರಕಿದ್ದು, ಮಳೆಗಾಲ ಮುಗಿಯುತ್ತಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ಆಗುಂಬೆ ಘಾಟಿಯ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಸಂಸದ ರಾಘವೇಂದ್ರರ ಪ್ರಸ್ತಾವನೆಯಂತೆ ಸುರಂಗ ಮಾರ್ಗ ಮತ್ತು ಈಗಿರುವ ರಸ್ತೆಗಳ ದ್ವಿಪಥದ ಬಗ್ಗೆ ಡಿಪಿಆರ್ ಗಾಗಿ ಟೆಂಡರ್ ಕರೆಯಲಾಗಿದ್ದು ಸಾಧ್ಯತಾ ವರದಿಯವಲಂಬಿಸಿ ಎರಡು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸುವಂತೆ ಎನ್.ಹೆಚ್ ಆರ್.ಓ ಶ್ರೀಧರವರಿಗೆ ದೂರವಾಣಿ ಮೂಲಕ ಸಲಹೆ ನೀಡಿದೆ. ಹೆದ್ದಾರಿ ಅಧಿಕಾರಿಗಳು ಭಾರಿ ತೂಕದ ವಾಹನಗಳನ್ನು ನಿರ್ಬಂಧಿಸದಿದ್ದರೆ ಮಳೆಗಾಲದಲ್ಲಿ ಘಾಟಿ ಕುಸಿಯುವ ಅಪಾಯದ ಬಗ್ಗೆ ವಿವರಿಸಿ ಜಿಲ್ಲಾಧಿಕಾರಿಗಳಿಗೆ ಅಗತ್ಯ ಸಲಹೆ ನೀಡಬೇಕೆಂದು ಸೂಚಿಸಿದೆ. ರಸ್ತೆ ದ್ವಿಪಥವಾಗಬೇಕಿದ್ದರೆ ಎಂಟನೇ ತಿರುವಿನ ನಂತರದ ಮೇಲ್ಭಾಗದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯಲು ಸರಳ ಆಪ್ ನಲ್ಲಿ ಪ್ರಸ್ತಾವನೆ ಸಲ್ಲಿಸಲು ಸಂಸದ ಕೋಟ ಸೂಚನೆ ನೀಡಿದರು.




By
ForthFocus™