ಉಡುಪಿ, ಜೂ.7: ಉಡುಪಿಯಲ್ಲಿ ಕಲೆ, ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಮಂಚೂಣಿಯಲ್ಲಿರುವ ಯಕ್ಷಗಾನ ಕಲಾರಂಗವು ಪ್ರತಿವರ್ಷ ನೀಡುತ್ತಿರುವ ತಲ್ಲೂರು ಕನಕಾ ಅಣ್ಣಯ್ಯ ಪ್ರಶಸ್ತಿಯನ್ನು ಈ ವರ್ಷ ಸುಳ್ಯದ ಡಾ. ಚಂದ್ರಶೇಖರ ದಾಮ್ಲೆಯವರಿಗೆ ನೀಡಿ ಗೌರವಿಸಿದೆ. ಐ.ವೈ.ಸಿ. ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಡಾ. ಭೀಮೇಶ್ವರ ಜೋಶಿಯವರು ದಾಮ್ಲೆ ದಂಪತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿಯು ರೂಪಾಯಿ 60,000/- ನಗದನ್ನು ಒಳಗೊಂಡಿದೆ.
ವಿಶ್ರಾಂತ ಉಪಕುಲಪತಿ ಪ್ರೊ. ವಿವೇಕ ರೈ ಅವರು ಡಾ. ದಾಮ್ಲೆಯವರು ಶಿಕ್ಷಣ ಮತ್ತು ಸಾಹಿತ್ಯದ ಜೊತೆಯಲ್ಲಿ ಯಕ್ಷಗಾನಕ್ಕೆ ರಂಗಭಾಷೆ’ ಎಂಬ ಮಹತ್ವದ ಕೃತಿಯ ಕೊಡುಗೆ ನೀಡಿದ್ದಾರೆ ಎಂದು ಅಭಿನಂದಿಸಿದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ತನ್ನ ಯಕ್ಷಗಾನದ ಮತ್ತು ಶಿಕ್ಷಣದ ಸೇವೆಯನ್ನು ಪರಿಗಣಿಸಿ ನೀಡಿರುವ ಈ ಪ್ರಶಸ್ತಿಯಿಂದಾಗಿ ತಾನು ಮಾಡಿರುವ ಕೆಲಸದ ಸಾರ್ಥಕ ಭಾವ ಮೂಡಿದೆ ಎಂದು ಸನ್ಮಾನಕ್ಕೆ ಉತ್ತರಿಸಿ ಡಾ. ದಾಮ್ಲೆಯವರು ಹೇಳಿದರು. ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಸ್ವಾಗತಿಸಿ ಪ್ರೊ. ನಾರಾಯಣ ಹೆಗಡೆ ವಂದಿಸಿದರು.




By
ForthFocus™