ಕೋಟ, ಏ.26: ಬೇಸಿಗೆ ಶಿಬಿರಗಳು ವಿದ್ಯಾರ್ಥಿಗಳ ವಿಕಸನ ಮಾಡುವಲ್ಲಿ ತುಂಬಾ ಸಹಕಾರಿಯಾಗಿರುವಂತದ್ದು, ಬಿಡುವಿನ ವೇಳೆಯಲ್ಲಿ ತಮ್ಮ ಒಳಗಿರುವ ಪ್ರತಿಭೆಗಳನ್ನು ಅನಾವರಣ ಮಾಡಿಕೊಳ್ಳಲು ಶಿಬಿರಗಳು ಚೇತೋಹಾರಿ. ಬಹಳ ಹಿಂದೆ ರಜೆಯ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಬಂಧು ಬಾಂದವರ ಮನೆಯಲ್ಲಿ ಕಳೆಯುತ್ತಿದ್ದರು. ಇವತ್ತು ಕುಟುಂಬಗಳು ಬಹಳ ಸಂಕೀರ್ಣ ವಾಗಿರುವುದರಿಂದ ಅವರಿಗೆ ಇಂತಹ ಶಿಬಿರಗಳ ಅವಶ್ಯಕತೆ ಇರುತ್ತದೆ. ಶಿಬಿರಗಳಲ್ಲಿ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಬೇಕಾದಂತಹ ವ್ಯವಸ್ಥೆಗಳೆಲ್ಲವೂ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಶಿಬಿರಗಳು ಯೋಚಿಸಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಕೋಟತಟ್ಟು ಗ್ರಾಮ ಪಂಚಾಯತ್ ಕೋಟತಟ್ಟು, ಉಸಿರು ಕೋಟ, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಕೋಟತಟ್ಟು ಆಸರೆಯಲ್ಲಿ ನಡೆದ ಕರಾವಳಿ ಕಣ್ಮಣಿ ದಿ. ಕೆ.ಸಿ. ಕುಂದರ್ ಸ್ಮರಣಾರ್ಥ 26ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ಅಭ್ಯಾಗತರಾಗಿ ಆಗಮಿಸಿರುವ ನಿವೃತ್ತ ಯೋಧ ಯೋಗೀಶ್ ಪಡುಕರೆ, ಆನಂದ ಸಿ ಕುಂದರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಟತಟ್ಟು ಗ್ರಾಮ ಪಂಚಾಯತ್ ಪ್ರಭಾರ ಪಿಡಿಓ ರವೀಂದ್ರ ರಾವ್, ವಾಸು ಪೂಜಾರಿ, ಸುಬ್ರಾಯ ಆಚಾರ್, ರಾಜೀವ ಕುಲಾಲ್, ಹಾಗೂ ಶಿಬಿರದ 5 ತಂಡಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ, ಸತೀಶ ವಡ್ಡರ್ಸೆ ವಂದಿಸಿದರು, ಅನ್ವಿತಾ ಕಾರ್ಯಕ್ರಮ ನಿರೂಪಿಸಿದರು.




By
ForthFocus™