ಕೋಟ, ಏ.17: ಕಳೆದ ಹದಿಮೂರು ವರ್ಷಗಳಿಂದ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇವರು ಆಯೋಜಿಸುತ್ತಿರುವ ಯಕ್ಷಗಾನ ನೃತ್ಯ ಮತ್ತು ಅಭಿನಯ ಶಿಬಿರ ‘ನಲಿಕುಣಿ’ ಪರಿಸರದ ಮಕ್ಕಳಲ್ಲಿ ಸಂಸ್ಕಾರದ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ. ಈ ಸಂಸ್ಥೆಯಲ್ಲಿ ನೀಡಲಾಗುವ ಶಿಸ್ತುಬದ್ದ ಶಿಕ್ಷಣ ಮಕ್ಕಳ ಜೀವನದಲ್ಲಿ ನಶಿಸದಂತ ಸಂಸ್ಕೃತಿಯನ್ನು ಕಲಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ಹೇಳಿದರು.
ಅವರು ಗುಂಡ್ಮಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದವರು ಆಯೋಜಿಸಿರುವ ಇಪ್ಪತ್ತು ದಿನಗಳ ‘ನಲಿ ಕುಣಿ’ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಾಚಾರ್ಯ ಸದಾನಂದ ಐತಾಳರು ಮಾತನಾಡಿ ಉತ್ತಮ ಯಕ್ಷ ಶಿಕ್ಷಣವನ್ನು ನೀಡುತ್ತಿರುವ ಕಲಾಕೇಂದ್ರದ ಶ್ರಮ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಯಕ್ಷ ಗುರುಗಳಾದ ಕೇಶವ ಆಚಾರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜಯೇಂದ್ರ ಅಡಿಗ, ರಾಘವೇಂದ್ರ ಮಟಪಾಡಿ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ವಂದಿಸಿದರು.




By
ForthFocus™