ಕೋಟ, ಏ.14: ಸಮಾಜದ ಋಣ ತೀರಿಸಲು ಜೈ ಕುಂದಾಪ್ರ ಎಂಬ ಸಂಘಟನೆಗಳು ರಕ್ತದಾನದಂತಹ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿ ಬೆಳೆದು ನಿಂತಿವೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಅಭಿಪ್ರಾಯಪಟ್ಟರು. ಭಾನುವಾರ ಕೋಟದಲ್ಲಿ ಕುಂದಾಪುರದ ಜೈ ಕುಂದಾಪ್ರ ಸೇವಾ ಟ್ರಸ್ಟ್ ದಶಮಾನೋತ್ಸವ ಕಾರ್ಯಕ್ರಮ ‘ಜೈ ಕುಂದಾಪ್ರ ಸಂಭ್ರಮ-೨೦೨೬’ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೋಟದ ಪಂಚವರ್ಣ ಸಂಘಟನೆಗೆ ಜೈ ಕುಂದಾಪ್ರ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿದ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಾಮಾಜಿಕ ಕಾರ್ಯಕರ್ತ ಕೋಟ ಶ್ರೀಕಾಂತ್ ಶೆಣೈ, ಪ್ರಗತಿಪರ ಕೃಷಿಕ ರವೀಂದ್ರ ಐತಾಳ್, ಧಾರ್ಮಿಕ ಕ್ಷೇತ್ರದ ಭಾಸ್ಕರ ಸ್ವಾಮೀ ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಅಶಕ್ತರಿಗೆ ನೆರವು, ವಿಲ್ ಚೇರ್ ಹಸ್ತಾಂತರ, ಪ್ರತಿಭಾ ಪುರಸ್ಕಾರ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ಜರಗಿದವು.
ಸಭಾಧ್ಯಕ್ಷತೆಯನ್ನು ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ, ಸತೀಶ್ ಶೆಟ್ಟಿ, ಜೈರಾಮ್ ಕುಲಾಲ್ ಜನ್ನಾಡಿ, ಪ್ರಕಾಶ್ ಸಿ ಶೆಟ್ಟಿ, ಜೈ ಕುಂದಾಪ್ರ ಸೇವಾ ಟ್ರಸ್ಟ್ ನ ಆದಿತ್ಯ ಕೋಟ, ರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೋಟ ದಿನೇಶ್ ಗಾಣಿಗ, ಕೋಟ ಪಂಚಾಯತ್ ಮಾಜಿ ಉಪಾಧ್ಯಕ್ಷ ಪಾಂಡು ಪೂಜಾರಿ, ನ್ಯಾಯವಾದಿ ನೀಲ್ ಫೆರೆರಾ, ಕಾಂಗ್ರೆಸ್ ಯುವ ಮುಖಂಡ ಅಜಿತ್ ಶೆಟ್ಟಿ, ಕೃಷಿಕರಾದ ಅವಿನಾಶ್ ಬಳ್ಮನೆ, ವಿದ್ಯುತ್ ಗುತ್ತಿಗೆದಾರ ಕೆ.ಆರ್ ನಾಯಕ್, ವಿಕ್ಕಿ ಮೊಬೈಲ್ಸ್ ಮಾಲಕ ವಿವೇಕ್ ಸುವರ್ಣ, ಪ್ರಮುಖರಾದ ಪುಂಡಲಿಕ ಮೊಗವೀರ, ಜಯರಾಜ್ ಸಾಲಿಯಾನ್ ಉಪಸ್ಥಿತರಿದ್ದರು.
ಮಂಜುನಾಥ್ ಹಿಲಿಯಾಣ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ, ತ್ರಿನೇತ್ರ ಕಲಾವಿದರು ಕುಡ್ಲ ಇವರಿಂದ ನಾಟಕ ಬ್ರಹ್ಮ ರಕ್ಕಸೆ ಪ್ರದರ್ಶನಗೊಂಡಿತು.




By
ForthFocus™