ಉಡುಪಿ, ಅ.15: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ದೇಶಸೇವೆಯ ಕಾರ್ಯದಲ್ಲಿ ಶತಮಾನ ಕಂಡಿರುವುದು ಸಂತರಾದ ನಮಗೂ ಸಂತಸ ತಂದಿದೆ. ಹಿಂದುತ್ವದ ರಕ್ಷಣೆಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಆರ್ ಎಸ್ ಎಸ್ ನ ನಿಸ್ವಾರ್ಥ ಸೇವೆಯಿಂದ ವಿಶ್ವದಲ್ಲಿ ಭಾರತ ರಾಷ್ಟ್ರ ಇನ್ನಷ್ಟು ಬೆಳಗಲಿ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾರೈಸಿದರು.
ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಬುಧವಾರ ಭೇಟಿ ನೀಡಿದ್ದ ಆರ್ ಎಸ್ ಎಸ್ ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರಿಗೆ ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ಪ್ರಸಾದ ಹಾಗೂ ಮಂತ್ರಾಕ್ಷತೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು.

ಸಾಧನೆಯ ಮಾರ್ಗದಲ್ಲಿ ಸಾಗುತ್ತಿರುವಾಗ ಅಥವಾ ಕೈಗೊಳ್ಳುವ ಕಾರ್ಯಗಳೆಲ್ಲವೂ ಸಾಧನೆಯಾಗ ಟೀಕೆ-ಟಿಪ್ಪಣಿಗಳು ಎದುರಾಗುವುದು ಸಹಜ. ಆ ಕುರಿತಾಗಿ ತಲೆಕೆಡಿಸಿಕೊಳ್ಳಬಾರದು. ಆರ್ ಎಸ್ ಎಸ್ ನ ಧ್ಯೇಯೋದ್ದೇಶ ಎಂದಿಗೂ ಸಕಾರಾತ್ಮಕವಾಗಿಯೇ ಇದೆ. ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಯಾವುದೇ ಪ್ರಚಾರ ಬಯಸದೆ, ಫಲಾಪೇಕ್ಷೆ ಇಲ್ಲದೆ ನೊಂದವರ ಸೇವೆ ಮಾಡುವುದನ್ನು ಕಂಡಿದ್ದೇವೆ. ದತ್ತಾತ್ರೇಯ ಹೊಸಬಾಳೆ ಅವರ ನೇತೃತ್ವದಲ್ಲಿ ಸಂಘ ಇನ್ನಷ್ಟು ಪ್ರಬಲವಾಗಿ ಬೆಳೆಯಲಿ, ಬೆಳಗಲಿ. ಆ ನಿಟ್ಟಿನಲ್ಲಿ ಸಂಘಟನೆಗೆ ಉಡುಪಿ ಶ್ರೀ ಕೃಷ್ಣನು ಇನ್ನಷ್ಟು ಶಕ್ತಿ ಕರುಣಿಸಲಿ. ಆರ್ ಎಸ್ ಎಸ್ ಮೂಲಕ ಎಲ್ಲ ಕುಟುಂಬಗಳಲ್ಲೂ ಸಂಸ್ಕಾರ ವೃದ್ಧಿಸಲಿ. ತನ್ಮೂಲಕ ರಾಷ್ಟ್ರೀಯ ಹಿತಾಸಕ್ತಿ ಜಾಗೃತವಾಗಲಿ. ಶತಮಾನೋತ್ಸವದ ಸಂಭ್ರಮದಲ್ಲಿರುವ ಸಂಘಕ್ಕೆ ಶುಭವಾಗಲಿ ಎಂದು ಶ್ರೀಗಳು ಹಾರೈಸಿದರು.
ಹಿಂದುಗಳಲ್ಲಿ ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕೋಟಿ ಗೀತಾ ಲೇಖನ ಯಜ್ಞದ ಮೂಲಕ ಪುತ್ತಿಗೆ ಶ್ರೀಗಳು ಜನರಲ್ಲಿ ಧಾರ್ಮಿಕ ಹಾಗೂ ದೇವರ ಭಾವವನ್ನು ಜಾಗೃತಗೊಳಿಸುತ್ತಿದ್ದಾರೆ. ಸಮಸ್ತ ಹಿಂದು ಸಮಾಜಕ್ಕೆ ಎಲ್ಲ ಮಠಾಧೀಶರ ಆಶೀರ್ವಾದ, ಮಾರ್ಗದರ್ಶನ ಯಾವತ್ತೂ ಇರಬೇಕು ಎಂದು ಆರ್ ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಪಟ್ಟದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಹೊಸಬಾಳೆ ಅವರಿಗೆ ಅನುಗ್ರಹಿಸಿದರು. ಉಡುಪಿ ಜಿಲ್ಲಾ ಆರ್ ಎಸ್ ಎಸ್ ನ ಪ್ರಮುಖ ಮಟ್ಟು ಲಕ್ಷ್ಮೀನಾರಾಯಣ ಆಚಾರ್ಯ ಉಪಸ್ಥಿತರಿದ್ದರು. ಹೊಸಬಾಳೆ ಅವರು ಇದೇ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳಿಂದ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಸ್ವೀಕರಿಸಿದರು.
ಭವ್ಯ ಸ್ವಾಗತ: ಶ್ರೀ ಕೃಷ್ಣದೇವರು ಹಾಗೂ ಶ್ರೀಗಳ ಭೇಟಿಗೂ ಮುನ್ನ ದತ್ತಾತ್ರೇಯ ಹೊಸಬಾಳೆ ಅವರನ್ನು ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಗೌರವಾದರಗಳಿಂದ ಭವ್ಯವಾಗಿ ಸ್ವಾಗತಿಸಲಾಯಿತು. ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಇತರರಿದ್ದರು.




By
ForthFocus™