ಕೋಟ, ಅ.2: ಒಂದು ಊರಿನಲ್ಲಿ ಯುವಕರ ತಂಡವೊಂದು ತಮ್ಮ ಸಮಾಜದ ಆಗು ಹೋಗುಗಳ ಬಗ್ಗೆ ಚಿಂತಿಸಿ ತಮ್ಮಿಂದ ಸಮಾಜಕ್ಕೆ ಏನಾದರೂ ನೀಡಬೇಕು ಎನ್ನುವ ಸಂಕಲ್ಪದೊಂದಿಗೆ ಕಾರ್ಯವೆಸಗುವುದರ ಮೂಲಕ ಯುವಕ ಮಂಡಲದ ಸ್ಥಾಪನೆಯ ಉದ್ದೇಶ ಸಾಕಾರಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಸಾೖಬ್ರಕಟ್ಟೆ ಶ್ರೀ ವಿನಾಯಕ ಯುವಕ ಮಂಡಲದ ಸಮಾಜಮುಖಿ ಕಾರ್ಯಕ್ರಮಗಳು ಯುವ ಪೀಳಿಗೆಗೆ ಮಾದರಿಯಾಗಲಿದೆ ಎಂದು ಸಾಂಸ್ಕೃತಿಕ ಚಿಂತಕ ದಿನೇಶ್ ಹೆಗ್ಡೆ ಮೊಳಹಳ್ಳಿ ಹೇಳಿದರು. ಅವರು ಶ್ರೀ ವಿನಾಯಕ ಯುವಕ ಮಂಡಲ ಸಾೖಬ್ರಕಟ್ಟೆ- ಯಡ್ತಾಡಿ ಇವರ ಆಶ್ರಯದಲ್ಲಿ ನಡೆಯುತ್ತಿರುವ 14 ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ನಮ್ಮೂರ ದಸರಾ-2025(ಭಕ್ತಿ ಬಣ್ಣದ ಸಂಭ್ರಮ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಂ. ವೀರಣ್ಣ ಶೆಟ್ಟಿ ಅವರಿಗೆ ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರ
ಯುವಕ ಮಂಡಲದ ವತಿಯಿಂದ ಕೊಡಮಾಡುವ 2025 ನೇ ಸಾಲಿನ ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರವನ್ನು ಮಹಾತ್ಮ ಗಾಂಧಿ ಫ್ರೌಡಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎಂ ವೀರಣ್ಣ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಪುರಸ್ಕೃತರು ಜನ್ಮ ಭೂಮಿಯಷ್ಟೇ ಕರ್ಮಭೂಮಿಯು ಶ್ರೇಷ್ಠವಾದುದು, ತಮ್ಮ ಸೇವ ಅವಧಿಯಲ್ಲಿ ಊರಿನ ಸಹಕಾರದ ಮೂಲಕ ಶಿಕ್ಷಕರಾಗಿ ಕೆಲವೊಂದು ಅಭಿವೃದ್ಧಿ ಕಾರ್ಯಗಳು ಸಾಧ್ಯವಾಯಿತು. ನಿವೃತ್ತಿಯಾದ ನಂತರವೂ ನನ್ನನ್ನು ಗುರಿಸಿದ ಯುವಕ ಮಂಡಲಕ್ಕೆ ಚಿರಋಣಿ ಎಂದರು. ಸಮಾರಂಭದಲ್ಲಿ ಶ್ರೀಮತಿ ಗೀತಾ ಎ. ಶೆಟ್ಟಿ, ಶಿಕ್ಷಕರು (ಕ್ರೀಡಾ ಕ್ಷೇತ್ರದ ಸಾಧಕರು) ರಂಜಿತ್ ಶಿರಿಯಾರ, ಮಾಧ್ಯಮ ಕ್ಷೇತ್ರ, ವಿಶೇಷ ಪುರಸ್ಕಾರವನ್ನು ಶಾಖಾಧಿಕಾರಿ ಮತ್ತು ಸಿಬ್ಬಂದಿ ವರ್ಗ, ಮೆಸ್ಕಾಂ ಶಿರಿಯಾರ ವಲಯ ಅವರಿಗೆ ಸನ್ಮಾನಿಸಲಾಯಿತು. ಶ್ರೀ ವಿನಾಯಕ ಯುವಕ ಮಂಡಲದ ಅಧ್ಯಕ್ಷರಾದ ಅಕ್ಷಯ ಶೆಟ್ಟಿ ವಹಿಸಿದ್ದರು.
ಉದ್ಯಮಿ ಗಣೇಶ ಪ್ರಸಾದ ಕಾಂಚನ್, ಜೈ ಗಣೇಶ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ (ರಿ.), ಸಾೖಬ್ರಕಟ್ಟೆ ಶಿರಿಯಾರ ಅಧ್ಯಕ್ಷ ಅಶೋಕ ಪ್ರಭು, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ (ರಿ.) ಸಾೖಬ್ರಕಟ್ಟೆ ಅಧ್ಯಕ್ಷ ಪ್ರದೀಪ ಬಲ್ಲಾಳ್, ಉದ್ಯಮಿಗಳಾದ ಯು. ಪ್ರಸಾದ ಭಟ್, ಶರತ್ ಕುಮಾರ್ ಶೆಟ್ಟಿ, ಪ್ರಗತಿಪರ ಕೃಷಿಕ ಸತೀಶ ಕುಮಾರ್ ಶೆಟ್ಟಿ, ಉದ್ಯಮಿ ಸಂದೀಪ ಶೆಟ್ಟಿ, ಪಂಚಾಯತ್ ಅಧ್ಯಕ್ಷ ಪ್ರಕಾಶ ಶೆಟ್ಟಿ, ವಕೀಲರಾದ ಗೋಪಾಲಕೃಷ್ಣ ಶೆಟ್ಟಿ ಶಿರಿಯಾರ, ಯುವಕ ಮಂಡಲದ ಕಾರ್ಯದರ್ಶಿ ಕಾರ್ತಿಕ್ ಉಪಸ್ಥಿತರಿದ್ದರು. ಯುವಕ ಮಂಡಲದ ಸದಸ್ಯ ಅಜಿತ್ ಸ್ವಾಗತಿಸಿ, ರಾಘವೇಂದ್ರ ಹೆಸ್ಕುತ್ತೂರು ನಿರೂಪಿಸಿದರು.




By
ForthFocus™