ಕೋಟ, ಜೂ.29: ಭಾನುವಾರ ಶ್ರೀ ಕಲ್ಲಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಕೋಟದ ಹರ್ತಟ್ಟು ಗಿಳಿಯಾರು ನಾಗರಿಕರ ಆಶ್ರಯದಲ್ಲಿ ‘ಗಮ್ಮತ್ತಿಗೆ ಆಟ ಗಂಜಿ ಊಟ’ ಗ್ರಾಮೀಣ ಸೊಗಡುಗಳ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ನಮ್ಮ ಜೀವನ ಕ್ರಮಗಳು ಬದಲಾವಣೆಗೊಳ್ಳುತ್ತಿದೆ ಅದರಲ್ಲೂ ಬಹುಮುಖ್ಯವಾಗಿ ಕೃಷಿ ಪದ್ದತಿಗಳು ಆಧುನಿಕತೆಯಲ್ಲಿ ಒಗ್ಗಿ ಹೋಗಿದ್ದು ಅತಿಯಾಗಿ ಬಳಸುವ ರಾಸಾಯನಿಕ ಪದಾರ್ಥಗಳ ಬಳಕೆಯಿಂದ ಮನುಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು. ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಉದ್ಘಾಟಿಸಿದರು.
ಮುಖ್ಯ ಅಭ್ಯಾಗತರಾಗಿ ಕಲ್ಲಟ್ಟು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಾಜಿ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್, ಕೋಟ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯ ಅಜಿತ್ ದೇವಾಡಿಗ, ಸಾಮಾಜಿಕ ಕಾರ್ಯಕರ್ತ ಕೆ.ದಿನೇಶ್ ಗಾಣಿಗ , ಸಂಘಟಕರಾದ ತಿಮ್ಮ ಕಾಂಚನ್, ಶೇಖರ್ ದೇವಾಡಿಗ, ಶ್ರೀಧರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಕೋಡಿ ರಾಜೇಶ್ ಕರ್ಕೇರ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಮೊದಲ ಬಾರಿಗೆ ಗ್ರಾಮೀಣ ಕಂಬಳ, ಪುರುಷರು ಹಾಗೂ ಮಹಿಳೆಯರಿಗೆ ಕೆಸರು ಗದ್ದೆ ವಿವಿಧ ಕ್ರೀಡಾಕೂಟ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ವಿಘ್ನೇಶ ದೇವಾಡಿಗ, ಸಮಾಜ ಸೇವಕ ಮಂಜುನಾಥ ಪೂಜಾರಿ ಸನ್ಮಾನ ಕಾರ್ಯಕ್ರಮ, 65 ವರ್ಷ ಮೇಲ್ಪಟ್ಟ ಮಹಿಳಾ ಕೃಷಿಕರಿಗೆ ಕ್ರೀಡೆ, ಮಡಿಕೆ ಸ್ಪರ್ಧೆ, ಹಗ್ಗ ಜಗಾಟ, ತ್ರೋಬಾಲ್, ತೆಂಗಿನಕಾಯಿ ಎಸೆತ ಹೀಗೆ ಹಲವು ಗ್ರಾಮೀಣ ಕ್ರೀಡೆಗಳು ಜರಗಿದವು.




By
ForthFocus™