ಕೊಡವೂರು, ಜೂ.10: ಶೃದ್ಧೆ, ಬದ್ಧತೆಯಿಂದ ಶ್ರೇಷ್ಠತೆ ಪಡೆದುಕೊಂಡ ನೃತ್ಯ ನಿಕೇತನ ಕೊಡವೂರು ಸಂಸ್ಥೆ ಹಲವಾರು ನೃತ್ಯ ವಿದ್ಯಾರ್ಥಿಗಳೊಂದಿಗೆ ನೃತ್ಯ ಗುರುಗಳನ್ನೂ ಸೃಷ್ಟಿಸಿ ನಮ್ಮ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದೆ ಎಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಅಭಿಪ್ರಾಯಪಟ್ಟರು. ಕೊಡವೂರು ಶ್ರೀ ಶಂಕರನಾರಾಯಣ ದೇವಳ ಹಾಗೂ ನೃತ್ಯ ನಿಕೇತನ ಕೊಡವೂರು ಜಂಟಿಯಾಗಿ ಆಯೋಜಿಸಿದ್ದ ನೃತ್ಯ ಶಂಕರ ನಾಟ್ಯ ಸರಣಿಯ ನೂರನೆ ಪ್ರಸ್ತುತಿಯ ಸಂದರ್ಭದಲ್ಲಿ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದ ಅವರು ಕಲೆ ಯಾವತ್ತೂ ಕಲಿಕೆಗೆ ಪೂರಕವಾಗಿದ್ದು ಅದು ಎಂದಿಗೂ ಮಾರಕವಾಗಿರಲು ಸಾಧ್ಯವಿಲ್ಲ ಎಂಬ ಆಶಯ ವ್ಯಕ್ತಪಡಿಸಿದರು.
ನೃತ್ಯ ನಿಕೇತನ, ಕೊಡವೂರು ಸಂಸ್ಥೆಯ ನಿರ್ದೇಶಕ ವಿದ್ವಾನ್ ಸುಧೀರ್ ರಾವ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಅಭಿನಂದನಾ ಮಾತುಗಳನ್ನಾಡಿದರು. ಉದ್ಯಮಿಗಳಾದ ಸಾಧು ಸಾಲಿಯಾನ್, ಕಲಾ ಪೋಷಕರಾದ ವಿಶ್ವನಾಥ್ ಶೆಣೈ, ರಂಗ ಕಲಾವಿದ ಎಂ ಶ್ರೀನಿವಾಸ್ ಭಟ್ ಶುಭ ಹಾರೈಸಿದರು.
ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಾಜ ಸೇರಿಗಾರ, ಭಾಸ್ಕರ ಪಾಲನ್, ಯಶೋಧರ ಸಾಲಿಯಾನ್, ಕೆ ಬಾಬ ಉಪಸ್ಥಿತರಿದ್ದರು. ನೃತ್ಯ ನಿಕೇತನ ಸಂಸ್ಥೆಯ ನಿರ್ದೇಶಕಿ ಮಾನಸಿ ಸುಧೀರ್ ಕೃತಜ್ಞತಾ ಮಾತುಗಳನ್ನಾಡಿದರು. ಮಧುಶ್ರೀ ಪ್ರಾರ್ಥಿಸಿದರು. ಕಲಾ ದಂಪತಿಗಳನ್ನು ಶ್ರೀ ದೇವಳದ ವತಿಯಿಂದ ‘ಶಂಕರನಾರಾಯಣಾನುಗ್ರಹ’ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಪೂರ್ಣಿಮಾ ಜನಾರ್ದನ ನಿರೂಪಿಸಿ, ಜನಾರ್ದನ ಕೊಡವೂರು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಶಂಕರ ಸರಣಿಯ ನೂರನೇ ಪ್ರಸ್ತುತಿ ಸಂಪನ್ನಗೊಂಡಿತು.




By
ForthFocus™