ಕೋಟ, ಮಾ.22: ರೈತರನ್ನು ನಿರ್ಲಕ್ಷಿಸದೆ ಅವರಿಗೆ ಸರಕಾರ ಹೆಚ್ಚಿನ ಸೌಲಭ್ಯ ಒದಗಿಸುವಂತಾಗಬೇಕು ಎಂದು ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ರಾಮಚಂದ್ರ ಐತಾಳ್ ಹೇಳಿದರು. ಶುಕ್ರವಾರ ಪಾಂಡೇಶ್ವರ ಯಡಬೆಟ್ಟಿನಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ, ರೈತಧ್ವನಿ ಸಂಘ ಕೋಟ, ಗೀತಾನಂದ ಫೌಂಡೇಶನ್ ಮಣೂರು, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸ್ನೇಹಕೂಟ ಮಣೂರು ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 44 ನೇ ಪಂಚವರ್ಣ ರೈತ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರಿದ್ದರೆ ಮಾತ್ರ ನಾವುಗಳು ಬದುಕಲು ಸಾಧ್ಯ. ಆದರೆ ಅವರನ್ಮು ಗುರುತಿಸುವ ಪರಂಪರೆ ಸಮಾಜದಲ್ಲಿ ಮರೆಯಾಗಿದೆ. ಈ ದಿಸೆಯಲ್ಲಿ ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ ಮಹತ್ವ ಪಡೆದುಕೊಂಡಿದೆ ಎಂದರು. ಇದೇ ವೇಳೆ ಪಾಂಡೇಶ್ವರ ಯಡಬೆಟ್ಟು ಹಿರಿಯ ಕೃಷಿಕ ರಾಮಕೃಷ್ಣ ಐತಾಳ್ ಇವರಿಗೆ ಪಂಚವರ್ಣ ರೈತ ಪುರಸ್ಕಾರ ನೀಡಿ ಗೌರವಿಸಲಾಯಿತು. ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ವಹಿಸಿದ್ದರು. ಸಾಸ್ತಾನ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಗೋವಿಂದ ಪೂಜಾರಿ ಅಭಿನಂದನಾ ನುಡಿಗಳನ್ನಾಡಿದರು. ಮುಖ್ಯ ಅಭ್ಯಾಗತರಾಗಿ ಪಾಂಡೇಶ್ವರ ಗ್ರಾಮ ಪಂಚಾಯತ್ ಸದಸ್ಯೆ ಕಲ್ಪನಾ ದಿನಕರ್, ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ ಮಯ್ಯ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ. ತಿಮ್ಮ ಪೂಜಾರಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ, ಪಂಚವರ್ಣದ ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವಿಕವಾಗಿ ಮಾತನಾಅಡಿದರು. ಸಂಚಾಲಕಿ ಸುಜಾತ ಎಂ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಮಹೇಶ್ ಬೆಳಗಾವಿ ವಂದಿಸಿದರು.




By
ForthFocus™