ಮಂಗಳೂರು, ಆ.9: ಈಗಿನ ಬಹುತೇಕ ಸಾಂಪ್ರದಾಯಿಕ ವಾಣಿಜ್ಯಶಾಸ್ತ್ರ ಪದವೀಧರರು ಔದ್ಯೋಗಿಕ ಕೌಶಲ್ಯಗಳನ್ನು ಹೊಂದಿಲ್ಲದಿರುವುದು ನಿರಾಶದಾಯಕವಾಗಿದೆ. ಈ ಕೊರತೆಯನ್ನು ತುಂಬಿಸುವುದರ ಕಡೆಗೆ ವಾಣಿಜ್ಯಶಾಸ್ತ್ರ ವಿಷಯದ ಅಧ್ಯಾಪಕರು ಗಂಭೀರವಾಗಿ ಯೋಚಿಸಬೇಕು ಎಂದು ಕಂಪನಿ ಸೆಕ್ರೆಟರಿ ಸೋನಾಲಿ ಮಲ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲ ಯ ವಾಣಿಜ್ಯಶಾಸ್ತ್ರ ಅಧ್ಯಾಪಕರ ಸಂಘದ (ಮುಕ್ತ) ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವಾಣಿಜ್ಯಶಾಸ್ತ್ರ ವಿಷಯಗಳ ನೂತನ ಪಠ್ಯಕ್ರಮ ಕುರಿತಾದ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪ್ರಾಧ್ಯಾಪಕರ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸಾಂಪ್ರದಾಯಿಕ ಕಲಿಕಾ ವಿಷಯಗಳ ಜೊತೆಗೆ ವಾಣಿಜ್ಯಶಾಸ್ತ್ರ ಕ್ಷೇತ್ರದಲ್ಲಿನ ನೂತನ ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆ ಆಧರಿತ ಬೆಳವಣಿಗೆಗಳ ಬಗ್ಗೆ ಅಧ್ಯಾಪಕರು ಅರಿತುಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರೆ ವಾಣಿಜ್ಯಶಾಸ್ತ್ರ ಮುಂದಿನ ದಿನಗಳಲ್ಲಿಯೂ ತನ್ನ ಬೇಡಿಕೆ ಉಳಿಸಿಕೊಳ್ಳಬಹುದು ಎಂದು ಹೇಳಿದರು.
ಕಾಲೇಜಿನ ಐಕ್ಯೂಏಸಿ ಸಂಯೋಜಕ ದೇವಿಪ್ರಸಾದ್ ಸ್ವಾಗತಿಸಿದರು. ಮುಕ್ತದ ಕಾರ್ಯದರ್ಶಿ ಡಾ. ಉದಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ಲೋಕೇಶನಾಥ್ ವಂದಿಸಿದರು. ಮುಕ್ತದ ಅಧ್ಯಕ್ಷ ಡಾ. ರವಿ ಎಂ ಎನ್., ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುವರ್ಣ ಮಾಲಿನಿ, ಮುಕ್ತದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಹ ಪಾಧ್ಯಾಪಕಿ ಡಾ. ಅವಿತ ಕ್ವಾಡ್ರಸ್ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಕಾರ್ಯಕ್ರಮದ ನಂತರ ರಾಜ್ಯ ಶಿಕ್ಷಣ ನೀತಿ ಪ್ರಕಾರ 26- 27ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿರುವ ವಾಣಿಜ್ಯಶಾಸ್ತ್ರ ಪದವಿಯ ಐದನೇ ಸೆಮಿಸ್ಟರಿನ ಪಠ್ಯಕ್ರಮಗಳ ಕುರಿತು ವಿವರವಾದ ಚರ್ಚೆ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸುಮಾರು 350 ಕ್ಕಿಂತಲೂ ಅಧಿಕ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.




By
ForthFocus™