ಮಲ್ಪೆ, ಸೆ.18: ಇಂದಿನ ಡಿಜಿಟಲ್ ಯುಗ ನಮ್ಮನ್ನು ತಂತ್ರಜ್ಞಾನದ ದಾಸರನ್ನಾಗಿಸಿದೆ. ಇಂಟರ್ನೆಟ್ ಹಾಗೂ ಮೊಬೈಲ್ ತಂತ್ರಜ್ಞಾನದ ದುರ್ಬಳಕೆ ಕೂಡ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಸೂಕ್ತ ಎಂದು ಬ್ಯಾಪ್ಟಿಸ್ಟ್ ಬ್ಯಾಡ್ಮಿಂಟನ್ ಅಕಾಡೆಮಿಯ ಗಣೇಶ್ ಕುಡ್ವ ಅಭಿಪ್ರಾಯಪಟ್ಟರು. ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು, ಇಲ್ಲಿ ಐ.ಕ್ಯೂ.ಎ.ಸಿ. ಸಹಯೋಗದೊಂದಿಗೆ ಆಯೋಜಿಸಲಾದ ‘ಯುವ ಜನತೆ ಮತ್ತು ಮೊಬೈಲ್ ಬಳಕೆ’ ಎಂಬ ಜಾಗ್ರತಿ ಕಾರ್ಯಕ್ರಮದಲ್ಲಿ ಸಂಪನ್ಯೂಲ ವ್ಯಕ್ತಿಯಾಗಿ ಮಾತನಾಡಿ, ಯುವಜನತೆ ಮೊಬೈಲ್ ಫೋನ್ ದುರ್ಬಳಕೆ ಮಾಡಿಕೊಂಡು ಸಂಕಷ್ಟಕ್ಕೀಡಾಗುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು. ವಿವಿಧ ಮೊಬೈಲ್ ಅಪ್ಲಿಕೇಶನ್ಸಗಳ ಮರ್ಮವನ್ನು ಮನಮುಟ್ಟುವಂತೆ ವಿವರಿಸುತ್ತಾ ಯುವಜನತೆ ಎಚ್ಚರದಿಂದ ಇರಬೇಕೆಂದರು.
ಕಾರ್ಯಕ್ರಮ ಸಂಯೋಜಕರಾದ, ಉಡುಪಿ ನಗರಸಭಾ ಸದಸ್ಯ ವಿಜಯ ಕೊಡವೂರು ಅವರು ಮಾತನಾಡಿ ಯುವಜನತೆ ಸಂಸ್ಕಾರವಂತರೂ, ಗುಣಶೀಲರೂ ಆಗಿ, ಸಮಾಜಕ್ಕೆ ಸೂಕ್ತ ಕೊಡುಗೆ ನೀಡಬೇಕೆಂದು ಕರೆಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ನಿತ್ಯಾನಂದ ಗಾಂವಕರ್ ವಹಿಸಿ ಮೊಬೈಲ್ ತಂತ್ರಜ್ಞಾನದ ದುರ್ಬಳಕೆಯಿಂದಾಗಿ ವಿದ್ಯಾರ್ಥಿಗಳು ದಾರಿತಪ್ಪುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದರು. ಆಂಗ್ಲಭಾಷಾ ವಿಭಾಗ ಮುಖ್ಯಸ್ಥ ಹಾಗು ಕಾಲೇಜಿನ ಶೈಕ್ಷಣಿಕ ಸಲಹೆಗಾರ ಪ್ರೊ. ಶ್ರೀಧರ್ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಸಂಖ್ಯಾಶಾಸ್ತ್ರ ಸಹ ಪ್ರಾಧ್ಯಾಪಕ ಉಮೇಶ್ ಪೈ ವಂದನಾರ್ಪಣೆಗೈದರು. ಐಕ್ಯೂಎಸಿ ಸಂಚಾಲಕ ಡಾ ವಿಷ್ಣುಮೂರ್ತಿ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಜಕುಮಾರ್ ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.




By
ForthFocus™