ಹಿರಿಯಡಕ, ಸೆ.16: ಆತ್ಮವಿಶ್ವಾಸ ಕಳೆದುಕೊಳ್ಳದೇ ಸಂಕಟದ ಸಂತೆಯಲ್ಲೂ ಸಂಭ್ರಮವನ್ನು ಹುಡುಕಿಕೊಳ್ಳುವ ಮೂಲಕ ಪರೀಕ್ಷೆಗಿಂತ ಬದುಕಿನಲ್ಲಿ ಗೆಲ್ಲುವಂತಾಗಬೇಕು ಮಾತ್ರವಲ್ಲ ಯಾರಿಗೂ ಮೋಸ ಮಾಡದೆ ಸೋಲನ್ನೂ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಆತ್ಮೋನ್ನತಿಯ ಗುಣವನ್ನು ಬೆಳೆಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಮಾಜ ಮತ್ತು ದೇಶಕ್ಕೆ ಆಸ್ತಿಯಾಗಬೇಕೆಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2025- 26ನೆಯ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಉದ್ಘಾಟನಾ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಿರ್ವ ಎಂ. ಎಸ್. ಆರ್. ಎಸ್. ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿಯವರು, ʼಪರಂಪರೆಯ ಬೆಳಕಿನೊಂದಿಗೆ ವರ್ತಮಾನದ ಎಚ್ಚರದಲ್ಲಿ ರೂಪುಗೊಳ್ಳುವ ಶಿಕ್ಷಣ ಆತ್ಮವಿಶ್ವಾಸದ ಜೊತೆಗೆ ಸಾಮಾಜಿಕ ನೆಮ್ಮದಿಯನ್ನು ತರಬಲ್ಲದುʼಎಂದರು.
ಪ್ರಾಂಶುಪಾಲ ಪ್ರೊ. ಜಯಪ್ರಕಾಶ್ ಶೆಟ್ಟಿ ಹೆಚ್, ಐಕ್ಯುಎಸಿ ಸಂಚಾಲಕ ಡಾ. ಲಿತಿನ್ ಬಿ ಎಂ., ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಅಧ್ಯಕ್ಷ ಈರಬಸು ಕುಂಬಾರ, ಉಪಾಧ್ಯಕ್ಷೆ ವೈಷ್ಣವಿ, ಕಾರ್ಯದರ್ಶಿ ಸಂತೋಷ್ ಹಾಗೂ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ. ಸೌಮ್ಯಲತಾ ಪಿ. ಪ್ರಮಾಣವಚನ ಬೋಧಿಸಿದರು. ಸಿತೀಕ್ಷಾ ಸ್ವಾಗತಿಸಿ, ಸುಹಾ ವಂದಿಸಿದರು. ಪಲ್ಲವಿ ನಿರೂಪಿಸಿದರು.




By
ForthFocus™