ಶಂಕರನಾರಾಯಣ, ಸೆ.16: ರಕ್ತದಾನದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಜಗತ್ತಿನಲ್ಲಿ ಅನೇಕ ಜೀವಗಳು ಸೂಕ್ತ ಸಮಯದಲ್ಲಿ ರಕ್ತ ಸಿಗದೆ ಕಳೆದುಹೋಗುತ್ತಿವೆ. ದಾನಿಗಳು ನೀಡಿದ ರಕ್ತ ರೋಗಿಗಳ ಜೀವ ಉಳಿಸಲು ಸಂಜೀವಿನಿಯ ಕೆಲಸವನ್ನು ಮಾಡುತ್ತದೆ ಎಂದು ಲಯನ್ಸ್ ಇಂಟರ್ನ್ಯಾಷನಲ್ ಉಡುಪಿ ಉಪರಾಜ್ಯಪಾಲ ರಾಜೀವ್ ಕೋಟ್ಯಾನ್ ಅಭಿಪ್ರಾಯಪಟ್ಟರು. ಅವರು ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಆರ್ಡಿ, ಬೆಳ್ವೆ-ಗೋಳಿಯಂಗಡಿ, ಕುಂದಾಪುರ ರೆಡ್ ಕ್ರಾಸ್ ಘಟಕ, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ಲಿಯೋ ಕ್ಲಬ್ ಹಾಗೂ ವಿವಿಧ ಸ್ಥಳೀಯ ಸಂಘಟನೆಗಳ ಸಹಕಾರದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ರಕ್ತದಾನದ ಉಪಯುಕ್ತತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಂದಾಪುರ ರೆಡ್ ಕ್ರಾಸ್ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ, “ರೆಡ್ ಕ್ರಾಸ್ ಯಾವಾಗಲೂ ತುರ್ತು ಸಹಾಯ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ನಿಂತಿರುತ್ತದೆ, ವಿದ್ಯಾರ್ಥಿಗಳು ರಕ್ತದಾನ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಅಮೂಲ್ಯ ಜೀವ ಉಳಿಸುವ ಕಾರ್ಯಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ, ರಕ್ತದಾನದಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ, ಬದಲಾಗಿ ಆರೋಗ್ಯ ವೃದ್ಧಿಸುತ್ತದೆ ” ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ ಭಟ್, ಕಾಲೇಜು ಶೈಕ್ಷಣಿಕ ಸಾಧನೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ವಿದ್ಯಾರ್ಥಿಗಳಲ್ಲಿ ಬೆಳೆಸುತ್ತಿದೆ. ರಕ್ತದಾನವು ಶ್ರೇಷ್ಠ ದಾನಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ” ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಉದ್ಯಮಿ ಸಿಎ ರಾಜೇಂದ್ರ ಕಿಣಿ, ಶಂಕರನಾರಾಯಣ ಪರಿಸರದ ರೋಟರಿ, ಯುವಕ ಮಂಡಲ, ರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘ ಸೇರಿದಂತೆ ಅನೇಕ ಸಂಘಟನೆಗಳ ಪ್ರತಿನಿಧಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಅಮೃತ ಸಂಗಡಿಗರು ಪ್ರಾರ್ಥಿಸಿ ಐಕ್ಯುಎಸಿ ಸಂಚಾಲಕ ವಸಂತ ಜೆ ಸ್ವಾಗತಿಸಿದರು. ರೆಡ್ ಕ್ರಾಸ್ ಸಂಚಾಲಕ ರಮೇಶ್ ಎನ್ ಎಸ್ ವಂದಿಸಿ, ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಪ್ರಜ್ಞ ನಿರೂಪಿಸಿದರು.




By
ForthFocus™