Home ಅಂಕಣ ಪರಿಸರ ಸ್ನೇಹಿ ಮಂಡೂಕ ಸಂತತಿ ವಿನಾಶದತ್ತ

ಪರಿಸರ ಸ್ನೇಹಿ ಮಂಡೂಕ ಸಂತತಿ ವಿನಾಶದತ್ತ

ಪ್ರಾಕೃತಿಕ ನಷ್ಟ

664
0

ಮಾನವ ಉಪಟಳದಿಂದ ಈಗ ಕಪ್ಪೆ ಸಂತತಿ ಬಹುತೇಕ ಇಳಿಮುಖಗೊಂಡಿದೆ. ಕಪ್ಪೆಗಳ ಬದುಕುವ ಹಕ್ಕನ್ನು ಮಾನವ ಕಸಿದುಕೊಂಡಿದ್ದಾನೆ. ಕಪ್ಪೆಬೇಟೆಗೆ ಸರಕಾರದ ನಿರ್ಬಂಧ ಇದ್ದರೂ ಆಹಾರ ವಸ್ತುವಾಗಿ ಉಪಯೋಗಕ್ಕೆ ಒಳಪಡುತ್ತಿದೆ.

ಲೋಕದ ಸೃಷ್ಟಿಯೇ ಒಂದು ವಿಸ್ಮಯ..! ವಿಚಿತ್ರ..! ಎನ್ನಬಹುದು. ಪ್ರತಿ ಜೀವಿಗಳು ಇನ್ನೊಂದು ಜೀವಿಗೆ ಆಹಾರ ವಸ್ತುವಾಗುತ್ತದೆ. ಪ್ರತಿ ಜೀವಿಯೂ ಇನ್ನೊಂದು ಜೀವಿಯ ಆಕ್ರಮಣದ ಭಯದಿಂದ ಬದುಕಬೇಕಾಗುತ್ತದೆ. ಹಾಗಾಗಿ ಆಹಾರದ ಸರಪಳಿಗೆ ಎಲ್ಲ ಜೀವಿಗಳು ಒಳಪಡುತ್ತವೆ. ಸೊಳ್ಳೆ-ಕೀಟಗಳನ್ನು ಕಪ್ಪೆಗಳು ತಿನ್ನುತ್ತವೆ. ಕಪ್ಪೆ, ಇಲಿಗಳನ್ನು ಉರಗಾದಿಗಳು ತಿನ್ನುತ್ತವೆ. ಉರಾಗದಿಗಳನ್ನು ನವಿಲು, ಮೂಂಗೂಸಿ ಭಕ್ಷಿಸುತ್ತದೆ. ನವಿಲಿನ ಮೊಟ್ಟೆಯನ್ನು ಹಾವು ತಿಂದರೆ, ನವಿಲನ್ನು ಹೆಬ್ಬಾವು ತಿನ್ನುತ್ತದೆ. ಬೆಕ್ಕನ್ನು ಗೂಬೆ ಹಿಡಿದು ತಿನ್ನುತ್ತದೆ. ಇವೆಲ್ಲವು ಪ್ರಾಣಿ ಪಕ್ಷಿಗಳ ಆಹಾರ ಪದ್ಧತಿಯ ಜೀವನ ಪಯಣ. ಒಂದು ಜೀವಿಯ ಸಂತತಿ ನಾಶಗೊಂಡರೆ, ಅದನ್ನು ಆಹಾರವಾಗಿ ಅವಲಂಬಿಸಿದ ಮತ್ತೊಂದು ಜೀವಿಗೆ ಹೊಡೆತ ಬೀಳುತ್ತದೆ. ಒಂದನ್ನು ಮತ್ತೊಂದು ಜೀವಿ ಬೇಟೆಯಾಡಿ ಜೀವಸಂಕುಲ ನಾಶವಾಗುತ್ತದೆ ಎಂಬುದು ಪೂರ್ಣ ಪ್ರಮಾಣದಲ್ಲಿ ನಂಬಲಾಗದು. ಅವುಗಳು ಮೂರು ಆರು ತಿಂಗಳುಗಳಲ್ಲಿ ಹಲವು ಸಂತತಿಗಳನ್ನು ಪ್ರಸವಿಸುತ್ತವೆ. ಮುಖ್ಯವಾಗಿ ಮಾನವ ಪ್ರಕೃತಿ ಮೇಲೆ ನಡೆಸುವ ಹಲ್ಲೆಗಳ ಕಾರಣದಿಂದಾಗಿ ಬಹಳಷ್ಟು ಜೀವ ವೈವಿದ್ಯತೆಗಳು ವಿನಾಶದಂಚಿಗೆ ತಲುಪಿವೆ. ಒಂದು ಉದಾಹರಣೆಯಾಗಿ ಕಪ್ಪೆ ಅಥವಾ ಮಂಡೂಕವನ್ನು ಹೆಸರಿಸಬಹುದು.

   ಸಾಮಾನ್ಯವಾಗಿ ಕಪ್ಪೆಗಳು ಮಳೆ ಬಿದ್ದಕೂಡಲೇ ವಟಗುಟ್ಟಲು ಆರಂಬಿಸುತ್ತವೆ. ಆವಾಗಲೇ ಅವು ಗೋಚರಕ್ಕೆ ಬರುವುದು. ಕಪ್ಪೆಗಳ ವಟಗುಟ್ಟುವಿಕೆಯಿಂದ ಹಳ್ಳಿಗರಿಗೆ ಮುಂಗಾರು ಆರಂಭದ ಮೂನ್ಸೂಚನೆ ದೊರೆಯುತ್ತದೆ. ಮಳೆಗೂ ಕಪ್ಪೆಗಳಿಗೆ ವಿಸ್ಮಯವಾದ ಸಂಬಂಧ ಇದೆ. ಕಪ್ಪೆಯ ದೇಹವು ಹೆಚ್ಚು ಉಷ್ಣತೆಯನ್ನು ಸಹಿಸುವುದಿಲ್ಲ. ಅದರ ಚರ್ಮದ ಮೇಲೆ ಒಂದು ಬಗೆಯ ಅಂಟು ದ್ರಾವಣ ಇರುತ್ತದೆ. ಆ ಅಂಟು ಪಸೆಯೇ ಕಪ್ಪೆಗಳನ್ನು ಶೀತಲವಾದ ವಾತವರಣದಲ್ಲಿ ಇಡುತ್ತದೆ. ಮಳೆ ಬಂದಾಗ ಅಡುಗುದಾಣದಲ್ಲಿ ಇರುವ ಕಪ್ಪೆಗಳು ಶೀತಲ ವಾತವರಣ ಅನುಭವಿಸಲು ಹೊರಗೆ ಬರುತ್ತವೆ. ಅದೇ ಸಮಯದಲ್ಲಿ ಸಂತಾನೋತ್ಪತಿ ಮಾಡುತ್ತವೆ. ಕಪ್ಪೆಗಳು ಬಹುತೇಕ ಮಾಂಸಾಹಾರಿ ಜೀವಿಗಳು. ಉಭಯ ವಾಸಿಗಳಾಗಿರುವ ಕಪ್ಪೆಗಳಲ್ಲಿ ವಿಶ್ವದಲ್ಲಿ ಸಾವಿರಕ್ಕೂ ಅಧಿಕ ಪ್ರಭೇದಗಳನ್ನು ಪ್ರಾಣಿಶಾಸ್ತ್ರಜ್ಞರು ಗುರುತಿಸಿದ್ದಾರೆ. ಕಪ್ಪೆಗಳು ಸಿಹಿ ನೀರಿನಲ್ಲಿ, ನೆಲದಾಳದಲ್ಲಿ, ನೆಲದಮೇಲೂ ವಾಸಿಸುವ ಶಕ್ತಿಯನ್ನು ಹೊಂದಿದೆ. ಕೆಲವು ಪ್ರಭೇದಗಳು ಮರಗಳಲ್ಲೂ ವಾಸಮಾಡುತ್ತವೆ. ಚರ್ಮದಿಂದಲೂ ಇವುಗಳು ಉಸಿರಾಡುತ್ತವೆ.

   ಕಪ್ಪೆ ಸಂಕುಲ ಪರಿಸರ ಸ್ನೇಹಿಗಳಾಗಿವೆ. ಇವು ನೀರಿನಲ್ಲಿರುವ ಹುಳ ಹುಪ್ಪಡಿಗಳನ್ನು ತಿನ್ನುತ್ತವೆ. ಕೊಳಚೆ ನೀರಿನಲ್ಲಿ ಉತ್ಪತ್ತಿಯಾಗುವ ರೋಗವಾಹಕ ಆಗಿರುವ ಡೆಂಗ್ಯೂ, ಮಲೇರಿಯಾ, ಚಿಕನ್ ಗೂನ್ಯ ಮುಂತಾದ ರೋಗಗಳ ಸೃಷ್ಟಿಸುವ ಮಾರಕ ಸೊಳ್ಳೆಗಳನ್ನು ಆಹಾರವಾಗಿ ಸೇವಿಸುತ್ತದೆ. ಮಾನವ ಉಪಟಳದಿಂದ ಈಗ ಕಪ್ಪೆ ಸಂತತಿ ಬಹುತೇಕ ಇಳಿಮುಖಗೊಂಡಿದೆ. ಕಪ್ಪೆಗಳ ಬದುಕುವ ಹಕ್ಕನ್ನು ಮಾನವ ಕಸಿದುಕೊಂಡಿದ್ದಾನೆ. ಕಪ್ಪೆಬೇಟೆಗೆ ಸರಕಾರದ ನಿರ್ಬಂಧ ಇದ್ದರೂ ಆಹಾರ ವಸ್ತುವಾಗಿ ಉಪಯೋಗಕ್ಕೆ ಒಳಪಡುತ್ತಿದೆ. ಹಳ್ಳಕೊಳ್ಳ ನದಿಗಳಲ್ಲಿ ಉದ್ಯಮಗಳ ವಿಷಕಾರಿ ರಾಸಾಯನಿಕ ನೀರುಗಳು ಹರಿದು ಬೀಡುವುದರಿಂದ ಕಪ್ಪೆ ಸಂತತಿ ನಾಶಗೊಳ್ಳುತ್ತಿದೆ.

   ವಿಕೃತ ಸಂತೋಷ ಪಡೆಯಲು ಚಿಕ್ಕಮಕ್ಕಳು ಕಪ್ಪೆಯನ್ನು ಹತ್ಯೆಗೊಳಿಸುವ ಪ್ರಕರಣಗಳು ಹೆಚ್ಚುತ್ತಿವೆ. ಹಳ್ಳ ಕೆರೆಗಳಿರುವ ಜಲ ಮೂಲ ಪ್ರದೇಶಗಳು ಆಕ್ರಮಣಕ್ಕೆ ಒಳಪಟ್ಟು ವಸತಿ ಪ್ರದೇಶಗಳಾಗಿವೆ. ಇವೆಲ್ಲಾ ಕಾರಣಗಳಿಂದ ಕಪ್ಪೆ ಸಂತತಿ ವಿನಾಶದ ಅಂಚಿಗೆ ತಲುಪುತ್ತಿದೆ. ಮುಂದಿನ ದಿನಗಳಲ್ಲಿ ಭೂಚರ, ಜಲಚರ ಕಪ್ಪೆಗಳನ್ನು ಪ್ರಾಣಿ ಸಂಗ್ರಹಾಲಯ ಅಥವ ಚಿತ್ರಪಟಗಳಲ್ಲಿ ನೋಡಬೇಕಾದ ಪರಿಸ್ಥಿತಿ ಬರಬಹುದು. ಹಾಗಾಗಿ ನಾವು ಮನುಕುಲಸ್ನೇಹಿ ಕಪ್ಪೆ ಪ್ರಭೇದಗಳನ್ನು ಅಗತ್ಯವಾಗಿ ಉಳಿಸಿಕೊಳ್ಳಬೇಕಾಗಿದೆ. ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಸರಕಾರ, ಸಂಘ-ಸಂಸ್ಥೆಗಳಿಂದ ಅಗತ್ಯವಾಗಿ ನಡೆಯಬೇಕಾಗಿದೆ.

-ತಾರಾನಾಥ್ ಮೇಸ್ತ ಶಿರೂರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.