Home ಸುದ್ಧಿಗಳು ರಾಷ್ಟ್ರೀಯ ಜಮ್ಮು ಕಾಶ್ಮೀರಕ್ಕೆ ಯುವ ನಾಯಕತ್ವ: ಪ್ರಧಾನಿ ಮೋದಿ

ಜಮ್ಮು ಕಾಶ್ಮೀರಕ್ಕೆ ಯುವ ನಾಯಕತ್ವ: ಪ್ರಧಾನಿ ಮೋದಿ

1134
0

ಜಮ್ಮು ಕಾಶ್ಮೀರಕ್ಕೆ ಯುವ ನಾಯಕರು ನೇತೃತ್ವವನ್ನು ನೀಡುವಲ್ಲಿ ಮುಂದೆ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ನವದೆಹಲಿಯಲ್ಲಿ ಗುರುವಾರ ನಡೆದ ಜಮ್ಮು ಕಾಶ್ಮೀರದ ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಮ್ಮು ಕಾಶ್ಮೀರದ ರಾಜಕೀಯ ಮುಖಂಡರೊಂದಿಗಿನ ಇಂದಿನ ಸಭೆಯು ಜಮ್ಮು ಕಾಶ್ಮೀರದ ಅಭಿವೃದ್ಧಿ ಮತ್ತು ಪ್ರಗತಿಯ ಕಡೆಗೆ ನಡೆಯುತ್ತಿರುವ ಪ್ರಯತ್ನಗಳಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಜಮ್ಮು ಕಾಶ್ಮೀರದ ಸರ್ವತೋಮುಖ ಬೆಳವಣಿಗೆ ನಮ್ಮ ಗುರಿಯಾಗಿದೆ.

ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ತಳಮಟ್ಟದಿಂದ ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ. ವಿಧಾನಸಭಾ ಕ್ಷೇತ್ರಗಳ ಗಡಿ ನಿರ್ಣಯ ತ್ವರಿತಗತಿಯಲ್ಲಿ ಆಗಬೇಕು. ಮತದಾನ ನಡೆದು ತನ್ಮೂಲಕ ಜಮ್ಮು ಕಾಶ್ಮೀರ ಚುನಾಯಿತ ಸರ್ಕಾರವನ್ನು ಪಡೆಯಬೇಕು. ಇದರಿಂದ ಅಭಿವೃದ್ಧಿಗೆ ಇಂಧನ ಒದಗಿಸಿದಂತಾಗುತ್ತದೆ.

ನಮ್ಮ ಪ್ರಜಾಪ್ರಭುತ್ವದ ಅತಿದೊಡ್ಡ ಶಕ್ತಿ ಎಂದರೆ ಸಭೆಯಲ್ಲಿ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ಸಾಮರ್ಥ್ಯ. ವಿಶೇಷವಾಗಿ ಯುವಕರು ಜಮ್ಮು ಕಾಶ್ಮೀರಕ್ಕೆ ರಾಜಕೀಯ ನಾಯಕತ್ವವನ್ನು ಒದಗಿಸಬೇಕು ಮತ್ತು ಅವರ ಆಕಾಂಕ್ಷೆಗಳನ್ನು ಸರ್ಕಾರ ಸರಿಯಾಗಿ ಈಡೇರಿಸಲು ಪೂರಕ ವಾತಾವರಣ ಕಲ್ಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ಹೇಳಿದರು.

ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್, ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್, ನ್ಯಾಶನಲ್ ಕಾನ್ಫರೆನ್ಸ್ ಹಿರಿಯ ನಾಯಕ ಡಾ. ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಜಮ್ಮು ಕಾಶ್ಮೀರದ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾ, ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಜ್ಜದ್ ಲೋನ್ ಉಪಸ್ಥಿತರಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ (2019 ಆಗಸ್ಟ್ 5) ನಂತರ ಇದು ಮೊದಲ ಬಾರಿಗೆ ನಡೆದ ಸಭೆಯಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.