ಉಡುಪಿ, ಆ.28: ಯಕ್ಷಶಿಕ್ಷಣ ಟ್ರಸ್ಟಿನ ವಿಶ್ವಸ್ತರ ಸಭೆ ಶುಕ್ರವಾರ ಟ್ರಸ್ಟಿನ ಗೌರವಾಧ್ಯಕ್ಷರು, ಪರ್ಯಾಯ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಸಾನಿಧ್ಯದಲ್ಲಿ ಜರಗಿತು. ಉಡುಪಿ ಶಾಸಕ ಟ್ರಸ್ಟ್ ನ ಅಧ್ಯಕ್ಷರೂ ಆದ ಯಶ್ಪಾಲ್ ಎ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ವರದಿ, ಪರಿಶೋಧಿತ ಲೆಕ್ಕಪತ್ರ ಮಂಡನೆಯ ಬಳಿಕ ಕಾರ್ಯದರ್ಶಿ ಮುರಲಿ ಕಡೆಕಾರ್ ಟ್ರಸ್ಟ್ ನ ಕಾರ್ಯಚಟುವಟಿಕೆಗಳನ್ನು ಸಭೆಯ ಗಮನಕ್ಕೆ ತಂದರು. ಉಡುಪಿ, ಕಾಪು, ಕುಂದಾಪುರ, ಬೈಂದೂರು ಈ ನಾಲ್ಕು ವಿಧಾನಸಭಾ ಕ್ಷೇತ್ರದ 99 ಪ್ರೌಢಶಾಲೆಗಳ ಯಕ್ಷಗಾನ ಪ್ರದರ್ಶನ ನವಂಬರ್ 16 ರಿಂದ ಆರಂಭಗೊಂಡು ಡಿಸೆಂಬರ್ ಅಂತ್ಯದವರೆಗೆ ಜರುಗಲಿದೆ ಎಂದು ತಿಳಿಸಿದರು.
ಪರ್ಯಾಯ ಶ್ರೀಗಳ ಮತ್ತು ನಾಲ್ವರು ಶಾಸಕರ ಪೂರ್ಣ ಸಹಕಾರದಿಂದ ಯಕ್ಷಶಿಕ್ಷಣ ಅಭಿಯಾನ ಯಶಸ್ವಿಯಾಗಿ ಜರುಗುತ್ತಿದೆ. ಅಂತಯೇ ಎಲ್ಲ ದಾನಿಗಳ ಹಾಗೂ ಯಕ್ಷಗಾನ ಗುರುಗಳ ಪೂರ್ಣ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಲಾಯಿತು. ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಪರ್ಯಾಯ ಮಠದ ದಿವಾನರು, ಟ್ರಸ್ಟ್ ನ ಉಪಾಧ್ಯಕ್ಷರು ಆದ ಡಾ.ಉದಯ ಕುಮಾರ್ ಸರಳತ್ತಾಯರು ಉಪಸ್ಥಿತರಿದ್ದರು. ಟ್ರಸ್ಟ್ ನ ವಿಶ್ವಸ್ಥರುಗಳಾದ ಎಂ.ಗಂಗಾಧರ ರಾವ್, ನಾರಾಯಣ ಎಂ.ಹೆಗಡೆ, ವಿ.ಜಿ. ಶೆಟ್ಟಿ, ಗಣೇಶ ಬ್ರಹ್ಮಾವರ, ವಿದ್ಯಾಪ್ರಸಾದ್, ಪ್ರಭಾಕರ ಭಂಡಿ, ನಾಗರಾಜ ಹೆಗಡೆ, ಉಮೇಶ ಭಟ್ ಹಾಗೂ ದಾನಿಗಳಾದ ಸುದರ್ಶನ ಮೂರ್ತಿ ದಂಪತಿಗಳು ಸಭೆಯಲ್ಲಿ ಭಾಗವಹಿಸಿದರು. ಯಕ್ಷಗಾನ ಗುರುಗಳು, ಪ್ರಸಾಧನ ತಜ್ಞರು ಆದ ಕೃಷ್ಣಸ್ವಾಮಿ ಜೋಶಿಯವರ ಸೇವೆಯನ್ನು ಸ್ಮರಿಸಿಕೊಂಡು ಸದ್ಗತಿಗಾಗಿ ಪ್ರಾರ್ಥಿಸಲಾಯಿತು.




By
ForthFocus™