ವಾಮದಪದವು. ಆ.28: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಶಿವರಾಮ ಕಾರಂತ ಕನ್ನಡ ಸಂಘ ಏರ್ಪಡಿಸಿದ್ದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಂತೋಷ್ ಆಳ್ವ, ಮಕ್ಕಳಿಗೆ ಭಾಷೆ ಮತ್ತು ಸಾಹಿತ್ಯದ ಮಹತ್ವವನ್ನು ಕುರಿತು ಅರಿವು ಮೂಡಿಸಿದರು. ಭಾಷೆ ಮತ್ತು ಸಾಹಿತ್ಯ ಮನುಷ್ಯನನ್ನು ಜಂಗಮ ಜಗತ್ತಿನ ಇತರ ಜಂತುಗಳಿಗಿಂತ ಭಿನ್ನವಾಗಿಸಿದೆ. ಇಂತಹ ಬಹಳ ದೊಡ್ಡ ಸಂಪನ್ಮೂಲವನ್ನು ಯಂತ್ರ ನಾಗರೀಕತೆಯಲ್ಲಿ ಕಳೆದು ಹೋಗಿ, ಮನುಷ್ಯ ಸಂಬಂಧವನ್ನು ಹಾಳುಗೆಡುತ್ತಿರುವ ನಮ್ಮ ಪೀಳಿಗೆ ಅರ್ಥಮಾಡಿಕೊಂಡು ಆ ವಿನಾಶದಿಂದ ಹೊರಗೆ ಬರುವ ನಿಟ್ಟಿನಲ್ಲಿ ಹಾಗೂ ವರ್ತಮಾನದ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳುವ ದಿಸೆಯಲ್ಲಿ ಸರಿಯಾಗಿ ಬಳಸಿಕೊಳ್ಳಬೇಕು ಕನ್ನಡದ ವಿವೇಕವು ಇದನ್ನೆ ಹೇಳಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಅಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹೇಶ್ ಕೆ.ಬಿ. ಅವರು ಸಾಹಿತ್ಯದ ಓದು ಸಾಂಪ್ರದಾಯಿಕತೆಯನ್ನು ಬಿಡಿಸಿಕೊಂಡು ತಂತ್ರಜ್ಞಾನದೊಟ್ಟಿಗೆ ಬೆಸೆದು ಹೊಸ ಹಾದಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಇದ್ದು ಭಾಷೆಯನ್ನು ಆ ನಿಟ್ಟಿನಲ್ಲಿ ದುಡಿಸಿಕೊಳ್ಳುವಬೇಕು ಎಂದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ.ವಿಶಾಲ್ ಪಿಂಟೋ, ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆಯ ಮುಖ್ಯ ಸಂಚಾಲಕರಾದ ಪ್ರೊ. ಕೋಕಿಲಾ. ಎಚ್.ಎಸ್. ಹಾಗೂ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಸತೀಶ್ ಗೌಡ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಲೋಹಿತ್.ಕೆ.ಸಿ. ಸ್ವಾಗತಿಸಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಪುಟ್ಟಲಕ್ಷ್ಮಮ್ಮ ವಂದಿಸಿದರು. ದ್ವಿತಿಯ ಬಿ.ಎಸ್.ಡಬ್ಲ್ಯೂ. ವಿದ್ಯಾರ್ಥಿನಿ ನಿತಿಕ್ಷಾ ಹಾಗೂ ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಹರ್ಷಿತಾ ನಿರೂಪಿಸಿದರು.




By
ForthFocus™