ಮಣಿಪಾಲ, ಜು.14: ಹಿರಿಯ ನಾಗರಿಕರಲ್ಲಿ ಕಂಡುಬರುವ ಮಾನಸಿಕ ಆರೋಗ್ಯ ಹಾಗೂ ಜ್ಞಾಪಕ ಶಕ್ತಿ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಹೊಸ ಸಮಗ್ರ ವೃದ್ಧಾಪ್ಯ ಮನೋವೈದ್ಯಕೀಯ ಚಿಕಿತ್ಸಾಲಯವನ್ನು ಆರಂಭಿಸಿದೆ. ಈ ಚಿಕಿತ್ಸಾಲಯವು ಪ್ರತಿ ಶುಕ್ರವಾರ ಮಧ್ಯಾಹ್ನ 2:30 ರಿಂದ ಮನೋವೈದ್ಯಕೀಯ ಹೊರರೋಗಿ ವಿಭಾಗದಲ್ಲಿ ಕಾರ್ಯನಿರ್ವಹಿಸಲಿದೆ.
ವಯಸ್ಸಾದಂತೆ ಖಿನ್ನತೆ, ಆತಂಕ, ಜ್ಞಾಪಕ ಶಕ್ತಿ ಕುಂಠಿತ ಹಾಗೂ ಇತರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿರಿಯ ನಾಗರಿಕರಿಗಾಗಿ ಈ ಚಿಕಿತ್ಸಾಲಯ ಮೀಸಲಾಗಿದೆ. ಇಲ್ಲಿನ ವೈದ್ಯರು ಹಿರಿಯ ನಾಗರಿಕರಲ್ಲಿ ಕಂಡುಬರುವ ಮನೋವೈದ್ಯಕೀಯ ಸಮಸ್ಯೆಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲಿದ್ದಾರೆ. ಇದರೊಂದಿಗೆ ಸೌಮ್ಯ ಮನೋ ಗ್ರಹಿಕೆ ದೌರ್ಬಲ್ಯ ಹಾಗೂ ಬುದ್ಧಿಮಾಂದ್ಯ ದಂತಹ ಸ್ಥಿತಿಗಳಿಗೂ ಚಿಕಿತ್ಸೆ ನೀಡಲಾಗುವುದು. ರೋಗಿಗಳು ಮತ್ತು ಅವರ ಕುಟುಂಬದವರು ಸಲಹೆ, ರೋಗ ನಿರ್ಣಯ ಹಾಗೂ ಚಿಕಿತ್ಸೆ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಪಡೆಯಬಹುದು.
ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇಂದು ದೇಶದಲ್ಲಿ 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಸುಮಾರು 13.8 ಕೋಟಿ ಜನರಿದ್ದಾರೆ. ಈ ಸಂಖ್ಯೆ 2031ರ ವೇಳೆಗೆ 19 ಕೋಟಿ ದಾಟಬಹುದು ಹಾಗೂ 2050ರ ವೇಳೆಗೆ ಸುಮಾರು 32 ಕೋಟಿ ತಲುಪಬಹುದು. ಜನರು ದೀರ್ಘಾಯುಷ್ಯ ಬದುಕುತ್ತಿದ್ದಂತೆ, ಭಾವನಾತ್ಮಕ ಹಾಗೂ ಜ್ಞಾಪಕ ಶಕ್ತಿ ಸಂಬಂಧಿತ ಸಮಸ್ಯೆಗಳೂ ಹೆಚ್ಚು ಸಾಮಾನ್ಯವಾಗುತ್ತಿವೆ. ಒಂದು ರಾಷ್ಟ್ರೀಯ ಅಧ್ಯಯನದ ಪ್ರಕಾರ, 60 ವರ್ಷ ಮೇಲ್ಪಟ್ಟ ಸುಮಾರು 88 ಲಕ್ಷ ಭಾರತೀಯರು, ಅಂದರೆ ಪ್ರತಿ ಹದಿಮೂರರಲ್ಲಿ ಸುಮಾರು ಒಬ್ಬರು ಬುದ್ಧಿಮಾಂದ್ಯದಿಂದ ಬಳಲುತ್ತಿದ್ದಾರೆ. ಪ್ರತಿ ಹತ್ತು ಹಿರಿಯ ನಾಗರಿಕರಲ್ಲಿ ಸುಮಾರು ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದೂ ಅಧ್ಯಯನಗಳು ತಿಳಿಸಿವೆ. ಜ್ಞಾಪಕ ಶಕ್ತಿ ಕುಂಠಿತ, ದುಃಖ ಅಥವಾ ವರ್ತನೆಯಲ್ಲಿನ ಬದಲಾವಣೆಗಳು ವೃದ್ಧಾಪ್ಯದ ಸಹಜ ಭಾಗ ಎಂದು ಕುಟುಂಬದವರು ಭಾವಿಸುವ ಕಾರಣ, ಈ ಸಮಸ್ಯೆಗಳು ಹೆಚ್ಚಿನ ಬಾರಿ ಗಮನಕ್ಕೆ ಬರುವುದೇ ಇಲ್ಲ.
ಇಂತಹ ಹಲವು ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು ಎಂದು ವೈದ್ಯರು ಹೇಳುತ್ತಾರೆ. ಸೂಕ್ತ ತಪಾಸಣೆ, ಆಪ್ತ ಸಮಾಲೋಚನೆ ಹಾಗೂ ಔಷಧೋಪಚಾರದ ಮೂಲಕ ಜ್ಞಾಪಕ ಶಕ್ತಿ ಕುಂಠಿತ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು, ಖಿನ್ನತೆ ಹಾಗೂ ಆತಂಕವನ್ನು ಕಡಿಮೆ ಮಾಡಬಹುದು ಮತ್ತು ಹಿರಿಯ ನಾಗರಿಕರು ತಮ್ಮ ದೈನಂದಿನ ಜೀವನವನ್ನು ಉತ್ತಮವಾಗಿ ನಿರ್ವಹಿಸಲು ನೆರವಾಗಬಹುದು. ಇದು ಕುಟುಂಬದವರಿಗೆ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಹಾಗೂ ತಮ್ಮ ಹಿರಿಯರಿಗೆ ಉತ್ತಮ ಆರೈಕೆ ಒದಗಿಸಲು ಸಹಾಯ ಮಾಡುತ್ತದೆ.
ಈ ಚಿಕಿತ್ಸಾಲಯವು ಹಲವು ಬಾರಿ ನಿರ್ಲಕ್ಷಿಸಲ್ಪಡುವ ಹಿರಿಯ ನಾಗರಿಕರ ಪ್ರಮುಖ ಅಗತ್ಯವನ್ನು ಪೂರೈಸಲಿದೆ ಎಂದು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ. ಜನರು ದೀರ್ಘಾಯುಷ್ಯ ಬದುಕುತ್ತಿದ್ದಂತೆ ಜ್ಞಾಪಕ ಶಕ್ತಿ ಕುಂಠಿತ, ಬುದ್ಧಿಮಾಂದ್ಯ ಹಾಗೂ ಖಿನ್ನತೆಯಂತಹ ಸಮಸ್ಯೆಗಳು ಹೆಚ್ಚುತ್ತಿದ್ದರೂ, ಇವು ವೃದ್ಧಾಪ್ಯದ ಭಾಗ ಎಂದು ಭಾವಿಸುವ ಕಾರಣ ಹಲವು ಬಾರಿ ಚಿಕಿತ್ಸೆ ದೊರೆಯದೇ ಉಳಿಯುತ್ತವೆ ಎಂದು ಅವರು ಹೇಳಿದರು. ಈ ಚಿಕಿತ್ಸಾಲಯದ ಮೂಲಕ ಹಿರಿಯ ನಾಗರಿಕರಿಗೆ ಎಲ್ಲಾ ಮಾನಸಿಕ ಸಮಸ್ಯೆಗಳಿಗೆ ಸೂಕ್ತ ತಪಾಸಣೆ, ಆಪ್ತ ಸಮಾಲೋಚನೆ ಹಾಗೂ ಉತ್ತಮ ಆರೈಕೆಯನ್ನು ಒಂದೇ ಸ್ಥಳದಲ್ಲಿ ನೀಡುವ ಜೊತೆಗೆ ಅವರ ಕುಟುಂಬಗಳಿಗೂ ಬೆಂಬಲ ನೀಡುವ ಉದ್ದೇಶ ಆಸ್ಪತ್ರೆಗಿದೆ ಎಂದು ಅವರು ಹೇಳಿದರು.
ರೋಗಿಗಳು ಮತ್ತು ಅವರ ಕುಟುಂಬದವರು ಪ್ರತಿ ಶುಕ್ರವಾರ ಮಧ್ಯಾಹ್ನ 2:30 ರಿಂದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಮನೋವೈದ್ಯಕೀಯ ಹೊರರೋಗಿ ವಿಭಾಗದಲ್ಲಿ ಸಮಗ್ರ ವೃದ್ಧಾಪ್ಯ ಮನೋವೈದ್ಯಕೀಯ ಚಿಕಿತ್ಸಾಲಯಕ್ಕೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 0820 2922761 ಅನ್ನು ಸಂಪರ್ಕಿಸಬಹುದು.




By
ForthFocus™