ಕೋಟ, ಜೂ.21: ಪಂಚವರ್ಣ ಸಂಘಟನೆ ಆರಂಭದಲ್ಲಿ ಕೈಗೊಂಡ ಪರಿಸರದ ಕಾರ್ಯ ನಿತ್ಯ ನಿರಂತರವಾಗಿರುವುದು ದೊಡ್ಡ ಸಾಧನೆಯೇ ಸರಿ ಎಂದು ಉಡುಪಿ ಜಿ.ಪಂ ಮಾಜಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ ಅಭಿಪ್ರಾಯಪಟ್ಟರು. ಭಾನುವಾರ ಕೋಟತಟ್ಟು ಬಾರಿಕೆರೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಅನ್ನಪೂರ್ಣ ನರ್ಸರಿ ಪೇತ್ರಿ ಇವರ ಸಹಯೋಗದೊಂದಿಗೆ 306 ನೇ ಭಾನುವಾರದ ಪರಿಸರ ಸ್ನೇಹಿ ಹಸಿರು ಹೆಜ್ಜೆ ಶೀರ್ಷಿಕೆಯಡಿ ಪಂಚವರ್ಣ ಸಂಘದ ಸದಸ್ಯರಾದ ವಸಂತಿ ಅಕ್ಷತಾ ಇವರ ಹುಟ್ಟುಹಬ್ಬದ ಪ್ರಯುಕ್ತ ಗಿಡ ಹಸ್ತಾಂತರಿಸಿ ಮಾತನಾಡಿ ಯಾವುದೇ ಸಂಘಟನೆ ಇರಲಿ ಅದರ ನಿರಂತರ ಚಟುವಟಿಕೆ ಆ ಸಂಸ್ಥೆಯ ಕ್ರಿಯಾಶೀಲತೆಯನ್ನು ತೋರ್ಪಡಿಸುತ್ತದೆ. ಪಕೃತಿಗಾಗಿ ತುಡಿತ ಹೊಂದಿದ ಈ ಸಂಸ್ಥೆಯ ವಿನೂತ ಕಾರ್ಯಕ್ರಮಗಳು ಜನಮನ್ನಣೆಯನ್ನು ಗಳಿಸಿದೆ ಎಂದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ಥಳೀಯ ಹಲವಾರು ಮನೆಗಳಲ್ಲಿ ವಿವಿಧ ತಳಿಯ ಗಿಡಗಳನ್ನು ನೆಟ್ಟು ಅದರ ಬಗ್ಗೆ ಜಾಗೃತಿ ಮೂಡಿಸಲಾಯಿತು. ಪಂಚವರ್ಣದ ಸದಸ್ಯರಾದ ವಸಂತಿ ಹಾಗೂ ಅಕ್ಷತಾ ಇವರ ಹುಟ್ಟುಹಬ್ಬಕ್ಕೆ ಸಂಘಟನೆ ಈ ವಾರದ ಅಭಿಯಾನವನ್ನು ಸಮರ್ಪಿಸಿಕೊಂಡಿತು. ಸಂಘದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ನೆರೆದಿದ್ದ ಯುವ ಸಮುದಾಯಕ್ಕೆ ಪರಿಸರ ಜಾಗೃತಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಕೋಟತಟ್ಟು ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಕುಂದರ್, ಬಾರಿಕೆರೆ ಯುವಕ ಮಂಡಲದ ಅಧ್ಯಕ್ಷ ರವಿ ಕುಂದರ್, ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು, ಸದಸ್ಯೆ ಅಕ್ಷತಾ ಉಪಸ್ಥಿತರಿದ್ದರು. ಪಂಚವರ್ಣದ ಸದಸ್ಯ ಪ್ರಭಾಕರ್ ಮಣೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿ ವಂದಿಸಿದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು. ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ, ಗೆಳೆಯರ ಬಳಗ ಕಾರ್ಕಡ ಸಹಕಾರ ನೀಡಿತು.




By
ForthFocus™