ಕಾರ್ಕಳ, ಮೇ 31: ಕಾರ್ಕಳ ತಾಲೂಕಿನ, ಮಾಳ ಗೇಟಿನಿಂದ ಎಸ್.ಕೆ ಬಾರ್ಡರ್ ಮೂಲಕ ಶೃಂಗೇರಿಯ ತನಿಕೋಡು ಗೇಟ್ ವರೆಗಿನ 29 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಬಗ್ಗೆ ಅಧಿಕಾರಿಗಳೊಂದಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಚರ್ಚಿಸಿದರು. ಬಳಿಕ ಮಾತನಾಡಿದ ಅವರು, ಹೆದ್ದಾರಿ ಅಭಿವೃದ್ಧಿಗೆ 550 ಕೋಟಿ ರೂಪಾಯಿ ಪ್ರಸ್ತಾಪನೆ ಕೇಂದ್ರ ಸರ್ಕಾರದ ಮುಂದಿದೆ. ಮಾಳ ಗೇಟ್ ಆರಂಭದಿಂದ ಇಕ್ಕೆಲಗಳಲ್ಲಿ ಬರುವ ಅರಣ್ಯ ತೆರವುಗೊಳಿಸಲು ಕಂದಾಯ ಇಲಾಖೆ ಮೂಲಕ ಅರಣ್ಯ ಇಲಾಖೆಗೆ 50 ಎಕರೆ ಭೂಮಿಯನ್ನು ವರ್ಗಾಯಿಸಬೇಕಾಗಿದ್ದು ಕಡತ ವಿಲೇವಾರಿಗಾಗಿ ಶಿವಮೊಗ್ಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ಸಮಯ ನಿಗಧಿಕರಿಸಲಾಗಿದೆ.
ಇಲಾಖೆಯ ಮಾಹಿತಿಯ ಪ್ರಕಾರ ಹಿಂದೆ ಗುಲಗುಂಜಿ ಮನೆ, ಕೊರ್ಕನಹಳ್ಳಿ ಸಹಿತ ಮೂರು ಸೇತುವೆಗಳು ಮಂಜೂರಾಗಿದ್ದರೂ ಅರಣ್ಯ ಇಲಾಖೆಯ ಅನುಮತಿ ಸಿಗದೇ ರದ್ದಾಗಿದ್ದವು. ಅನುಮತಿ ನಿರೀಕ್ಷಿಸಿ ರಸ್ತೆಯ ಇಕ್ಕೆಲಗಳಲ್ಲಿ ಗಡಿ ಗುರುತು ಮಾಡಲು ಸೂಚನೆ ನೀಡಿದ್ದೆ. ಪ್ರಯತ್ನ ಸಫಲವಾಗಿ ಕಂದಾಯ ಇಲಾಖೆ ಪ್ರಸ್ತಾಪಿತ ಭೂಮಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೆ 1999 ರಿಂದ ಅಂದರೆ ಸುಮಾರು 25 ವರ್ಷದಿಂದ ನೆನೆಗುದಿಗೆ ಬಿದ್ದ ಮಾಳ-ತನಿಕೋಡು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ ಚಾಲನೆ ಸಿಗಲಿದೆ.
ರಾ.ಹೆ. ಇಲಾಖೆಯ ನವೀನ್ ರಾಜ್, ಅರಣ್ಯ ಇಲಾಖೆ ಅರುಣ್, ಸತೀಶ್ ನಾಯಕ್, ಸುಬ್ರಹ್ಮಣ್ಯ ಮುಂತಾದವರಿದ್ದರು.




By
ForthFocus™