ಉಡುಪಿ, ಮೇ 27: ವಿಶ್ವ ಪರಿಸರ ದಿನಾಚರಣೆ 2026 ರ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಉಡುಪಿ ಇವರ ವತಿಯಿಂದ ಪರಿಸರ ಜಾಗೃತಿ ಹಾಗೂ ಹವಾಮಾನ ಕ್ರಮಗಳಿಗೆ ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ವಿಶೇಷ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರಕೃತಿಯಿಂದ ಪ್ರೇರಿತ, ಹವಾಮಾನಕ್ಕಾಗಿ; ನಮ್ಮ ಭವಿಷ್ಯಕ್ಕಾಗಿ ಎಂಬ ಧ್ಯೇಯವಾಕ್ಯದಡಿ ನಡೆಯಲಿರುವ ಈ ಸ್ಪರ್ಧೆಯ ಮೂಲಕ ಪರಿಸರ ಸಂರಕ್ಷಣೆ, ಸುಸ್ಥಿರ ಜೀವನಶೈಲಿ, ಹವಾಮಾನ ಬದಲಾವಣೆಯ ಬಗ್ಗೆ ಅರಿವು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು.
ಜಿಲ್ಲೆಯ ನಿವಾಸಿಗಳು ಮುಕ್ತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ತಮ್ಮ ಸೃಜನಶೀಲತೆಯನ್ನು ಬಳಸಿಕೊಂಡು 30 ಸೆಕೆಂಡುಗಳಿಂದ 120 ಸೆಕೆಂಡುಗಳ ಅವಧಿಯ ಮೂಲ ರೀಲ್ಸ್ ವೀಡಿಯೋಗಳನ್ನು ಸಿದ್ಧಪಡಿಸಿ, ಜೂನ್ 3 ರ ಒಳಗಾಗಿ ಇ-ಮೇಲ್ udupi@kspcb.gov.in, kspcbroudupi@gmail.com ವಿಳಾಸ ಹಾಗೂ ಮೊ.ನಂ: 9964027311 ಗೆ ವಾಟ್ಸಾಪ್ ಮೂಲಕ ಕಳುಹಿಸಬಹುದಾಗಿದೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಕ್ರಮವಾಗಿ 5000, 3000 ಹಾಗೂ 2000 ರೂ.ಗಳ ನಗದು ಬಹುಮಾನ ನೀಡಲಾಗುವುದು. ಸಲ್ಲಿಕೆಯಾಗುವ ವಿಡಿಯೋಗಳು ಸ್ಪರ್ಧೆಯ ಅಧಿಕೃತ ವಿಷಯ ವಸ್ತುವಿಗೆ ಹೊಂದಿಕೆಯಾಗಿರಬೇಕು. ಅಸಭ್ಯ, ಆಕ್ರಮಣಕಾರಿ, ಮಾನಹಾನಿಕಾರಕ ಅಥವಾ ಧಾರ್ಮಿಕವಾಗಿ ಸೂಕ್ಷ್ಮ ವಿಷಯಗಳನ್ನು ಒಳಗೊಂಡಿರಬಾರದು ಎಂದು ಕ.ರಾ.ಮಾ.ನಿ.ಮಂಡಳಿಯ ಪರಿಸರ ಅಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.




By
ForthFocus™