ಉಡುಪಿ, ಮೇ 14: ಉಡುಪಿ ಜಿಲ್ಲೆ ಸ್ವಚ್ಛತೆಯಲ್ಲಿ ರಾಜ್ಯಮಟ್ಟದಲ್ಲೇ ಹೆಸರು ಗಳಿಸಿದೆ. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿಯೂ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಲಾಗುತ್ತಿದೆ. ಆದರೆ, ಉಡುಪಿ ನಗರಸಭೆಯ ಗೋಪಾಲಪುರ ವಾರ್ಡಿನ ಗೋಪಾಲಪುರ-ಗರಡಿಮಜಲು ರಸ್ತೆಯ ಪೊಟ್ಟುಕೆರೆ ಸನಿಹದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಕೃತಕ ಡಂಪಿಂಗ್ ಯಾರ್ಡ್ ಸೃಷಿಯಾಗಿದೆ.
ತ್ಯಾಜ್ಯವನ್ನು ಸಂಬಂಧಪಟ್ಟ ನಗರಸಭೆ/ ಪಂಚಾಯತ್ ಗೆ ವಿಲೇವಾರಿಗೆ ನೀಡುವ ಬದಲಿಗೆ ಈ ಪರಿಸರದಲ್ಲಿ ಎಸೆಯುವ ಮೂಲಕ ಪರಿಸರದ ವಾತಾವರಣಕ್ಕೆ ಮತ್ತು ಸೌಂದರ್ಯಕ್ಕೆ ಧಕ್ಕೆ ತರುವ ಹ್ಯೇಯ ಕೃತ್ಯ ನಿರ್ಭೀತಿಯಿಂದ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಇಲ್ಲಿ ಸಿಸಿಟಿವಿ ಅಳವಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ತ್ಯಾಜ್ಯ ಹೆಚ್ಚಾದಾಗ ಇದನ್ನು ಸುಡಲಾಗುತ್ತಿದ್ದು ಬಹುತೇಕ ಪ್ಲಾಸ್ಟಿಕ್ ತ್ಯಾಜ್ಯಗಳೇ ಇರುವ ಕಾರಣ ಸುಟ್ಟರೆ ಸುತ್ತಮುತ್ತಲಿನ ಪರಿಸರದ ಜನರಿಗೆ ಶ್ವಾಸಕೋಶದ ಕಾಯಿಲೆಗಳು ಕಟ್ಟಿಟ್ಟ ಬುತ್ತಿ. ಡೈಪರ್, ಗಾಜಿನ ಬಾಟಲಿ, ಕೊಳೆತ ಆಹಾರ ಪದಾರ್ಥಗಳನ್ನು ಇಲ್ಲಿ ಎಸೆದ ಕಾರಣ ಗಬ್ಬು ವಾಸನೆ ಹರಡಿದೆ. ಇದರ ಬಗ್ಗೆ ಅರಿವಿದ್ದರೂ ಸುತ್ತಮುತ್ತಲಿನ ಜನರು ಮೌನಕ್ಕೆ ಶರಣಾದ ಹಾಗಿದೆ.
ಸಂಬಂಧಪಟ್ಟ ಇಲಾಖೆಯು ಇನ್ನಾದರೂ ಎಚ್ಚೆತ್ತುಕೊಂಡು ತ್ಯಾಜ್ಯ ಎಸೆಯುವವರ ಹೆಡೆಮುರಿ ಕಟ್ಟುವ ಕಾರ್ಯ ಮಾಡದಿದ್ದರೆ ಈ ಪರಿಸರವು ತ್ಯಾಜ್ಯದ ಕೊಂಪೆಯಾಗುವ ದಿನ ಬಹಳ ದೂರವಿಲ್ಲ.




By
ForthFocus™