ಕೋಟ, ಮೇ 9: ಬೇಸಿಗೆ ಶಿಬಿರಗಳು ಕೇವಲ ರಜಾ ಶಿಬಿರಗಳಾಗದೆ ಮಕ್ಕಳ ಮನೋವಿಕಾಸದ ಜೊತೆ ಅವರನ್ನು ಸುಸಂಸ್ಕೃತರನ್ನಾಗಿಸಲಿ ಎಂದು ಸಮಾಜ ಸೇವಕ ಕಟ್ಕೇರೆ ಪ್ರೇಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ಶನಿವಾರ ಕೋಟ ಪಂಚಾಯತ್ ಸಭಾಂಗಣದಲ್ಲಿ ಕೋಟ ಗ್ರಾಮ ಪಂಚಾಯತ್, ಅರಿವು ಡಿಜಿಟಲ್ ಗ್ರಂಥಾಲಯ ಕೇಂದ್ರ ಕೋಟ, ಪಂಚವರ್ಣ ಸಂಘಟನೆ ಕೋಟ, ಇಂಡಿಕಾ ಕಲಾ ಬಳಗ ಪಡುಕರೆ, ಪ್ರಕೃತಿ ಸಂಜೀವಿನಿ ಸಂಘ ಕೋಟ ಪಂಚಾಯತ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಐದು ದಿನಗಳ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಐದು ದಿನಗಳಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಾಗರತ್ನ ಉಡುಪ, ಜಯಲಕ್ಷ್ಮೀ, ವಸಂತಿ, ಪ್ರಜ್ಞಾ ಹಂದಟ್ಟು ಇವರುಗಳನ್ನು ಗೌರವಿಸಲಾಯಿತು. ಪಂಚವರ್ಣ ಯುವಕ ಮಂಡಲದ ಉಪಾಧ್ಯಕ್ಷ ದಿನೇಶ್ ಆಚಾರ್, ಇಂಡಿಕಾ ಕಲಾ ಬಳಗದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪ್ರಕೃತಿ ಸಂಜೀವಿನಿ ಸಂಘದ ಮಾಲತಿ ಶೇಖರ್ ಉಪಸ್ಥಿತರಿದ್ದರು. ಅರಿವು ಡಿಜಿಟಲ್ ಗ್ರಂಥಾಲದ ಗ್ರಂಥಪಾಲಕಿ ಜ್ಯೋತಿ ಗಿಳಿಯಾರು ಸ್ವಾಗತಿಸಿ, ಪಂಚವರ್ಣದ ಸುಜಾತ ಬಾಯರಿ ನಿರೂಪಿಸಿ, ಪಂಚಾಯತ್ ಪಿಡಿಒ ಉಮೇಶ್ ವಂದಿಸಿದರು.




By
ForthFocus™