ಉಡುಪಿ, ಏ.28: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಪರ ಅಭಿಯಾನ ನಿರ್ದೇಶಕರಾದ ಶ್ರೀನಿವಾಸ್ ಎಂ ಅವರು ಉಡುಪಿ ಜಿಲ್ಲಾ ಪಂಚಾಯತ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಂಜೀವಿನಿ’ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರ ಆರ್ಥಿಕ ಸ್ವಾವಲಂಬನೆಯೇ ಅಭಿಯಾನದ ಮೂಲ ಉದ್ದೇಶವಾಗಿದ್ದು, ಜಿಲ್ಲೆಯಲ್ಲಿ ಹೊಸ ಸ್ವಸಹಾಯ ಸಂಘಗಳ ರಚನೆ ಹಾಗೂ ಸಂಜೀವಿನಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಪ್ರತಿ ತಾಲೂಕಿನಲ್ಲಿ ‘ಮಾಸಿಕ ಸಂತೆ’ ಆಯೋಜಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ಜಿಲ್ಲೆಯ ವಿವಿಧ ಘಟಕಗಳಾದ ಬನ್ನಂಜೆ ಕ್ಲೌಡ್ ಕಿಚನ್, ಕೆಮ್ಮಣ್ಣು ಪ್ರವಾಸೋದ್ಯಮ ಘಟಕ ಹಾಗೂ ಮಲ್ಪೆ ಅಕ್ಕ ಕೆಫೆಗಳಿಗೆ ಭೇಟಿ ನೀಡಿದ ಅವರು, ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಿದರು. ವಿಶೇಷವಾಗಿ ರಜತಾದ್ರಿ ಅಕ್ಕ ಕೆಫೆಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಲು ಹಾಗೂ ಸ್ಥಳೀಯ ಪೌಷ್ಟಿಕ ಆಹಾರಗಳನ್ನು ಪರಿಚಯಿಸಲು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ಪ್ರತೀಕ್ ಭಾಯಲ್ ಅವರೊಂದಿಗೆ ಯೋಜನೆಯ ಅನುಷ್ಠಾನದ ಕುರಿತು ಚರ್ಚೆ ನಡೆಸಿದ ಅವರು, ಜಿಲ್ಲೆಯ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಭೆಯಲ್ಲಿ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರಭಾಕರ್ ಆಚಾರ್, ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ, ವಿಷಯ ನಿರ್ವಹಕರಾದ ಅನಂತ ಕೃಷ್ಣ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ನವ್ಯ, ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್, ಕೃಷಿ ವ್ಯವಸ್ಥಾಪಕರಾದ ಸೌಮ್ಯ, ಯುವ ವೃತ್ತಿಪರರಾದ ರವಿ ಭೋವಿ, ಶಿವಾನಂದ್, ಡಿಐಎಂಎಸ್ ಉಷಾ, ಕಚೇರಿ ಸಹಾಯಕರಾದ ಚೈತ್ರ ಹಾಗೂ ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿ ಮತ್ತು ಮಹಿಳಾ ಉತ್ಪಾದಕ ಕಂಪನಿಯ ಸಿಬ್ಬಂದಿ ಉಪಸ್ಥಿತರಿದ್ದರು.




By
ForthFocus™