ನಿಟ್ಟೆ, ಏ.18: ವಿದ್ಯಾರ್ಥಿಗಳು ತಮ್ಮ ಜ್ಞಾನವೃದ್ಧಿಗಾಗಿ ಸಮಾಜಕ್ಕೆ ಉಪಯುಕ್ತವಾಗುವಂತಹ ಪ್ರಾಜೆಕ್ಟ್ ಗಳನ್ನು ಮಾಡಬೇಕು ಎಂದು ಮಣಿಪಾಲದ ಸ್ಕೂಲ್ ಆಫ್ ಕಂಪ್ಯೂಟರ್ ಇಂಜಿನಿಯರಿಂಗ್ ನ ಪ್ರಾಧ್ಯಾಪಕ ಡಾ. ಕೃಷ್ಣಮೂರ್ತಿ ಮಕ್ಕಿತ್ತಾಯ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ತನ್ನ ಹಳೆಯ ವಿದ್ಯಾರ್ಥಿ ಸಂಘವಾದ ‘ವೆನಮಿತಾ’ದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಅಂತಿಮ ವರ್ಷದ ಯುಜಿ ಪ್ರಾಜೆಕ್ಟ್ಸ್ ನ ವಾರ್ಷಿಕ ಪ್ರದರ್ಶನ ಎಕ್ಸ್ಪ್ರೊ 2025-26 ನ್ನು ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮ ವಿದ್ಯಾರ್ಥಿ ಯೋಜನೆಗಳನ್ನು ಪ್ರದರ್ಶಿಸುವ ಮತ್ತು ತಾಂತ್ರಿಕ ನಾವೀನ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು ಶೈಕ್ಷಣಿಕ ಜ್ಞಾನ ಮತ್ತು ಉದ್ಯಮ ಕೌಶಲ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮಹತ್ವದ ಚಿಂತನೆಯನ್ನು ಪ್ರತಿಪಾದಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಸಮಸ್ಯೆ ಪರಿಹಾರವನ್ನು ಉತ್ತೇಜಿಸುವ ಕಲಿಕೆಯ ವಾತಾವರಣವನ್ನು ಬೆಳೆಸುವ ಸಂಸ್ಥೆಯ ಬದ್ಧತೆಯ ಬಗ್ಗೆ ತಿಳಿಯಪಡಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ವಿವಿಧ ಇಂಜಿನಿಯರಿಂಗ್ ವಿಭಾಗಗಳ ಒಟ್ಟು 360 ಯೋಜನೆಗಳನ್ನು ಪ್ರದರ್ಶಿಸಲಾಯಿತು. ಎಕ್ಸ್ ಪ್ರೋ ಆಬ್ಸ್ಟ್ರ್ಯಾಕ್ಟ್ ವಾಲ್ಯೂಮ್-24 ನ್ನು ಬಿಡುಗಡೆಗೊಳಿಸಲಾಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಪ್ರತೀ ವಿಭಾಗದಲ್ಲಿ ಪ್ರದರ್ಶನಗೊಂಡ ಉತ್ತಮ ಪ್ರಾಜೆಕ್ಟ್ ಗಳಿಗೆ ವಿನಮಿತ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಬಹುಮಾನ ವಿತರಿಸಲಾಯಿತು. ಎಕ್ಸ್ಪ್ರೊ 2025-26ರ ಸಂಯೋಜಕಿ ಡಾ.ನಯನಾ ಶೆಟ್ಟಿ ಸ್ವಾಗತಿಸಿದರು. ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸ್ನೇಹಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.




By
ForthFocus™