ಉಡುಪಿ, ಏ.17: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ಲೇಸ್ಮೆಂಟ್ ಸೆಲ್, ಐ.ಕ್ಯೂ.ಎ.ಸಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಉದ್ಯೋಗ ನೋಂದಣಿ ಅಭಿಯಾನ ನಡೆಯಿತು. ವಿದ್ಯಾರ್ಥಿಗಳ ಭವಿಷ್ಯದ ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೌನ್ಸೆಲರ್ ಹಾಗೂ ತರಬೇತುದಾರರಾದ ಲಕ್ಷ್ಮೀ ಸುವರ್ಣ ಅವರು ವಿದ್ಯಾರ್ಥಿಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸೇವೆಗಳು, ಉದ್ಯೋಗ ನೋಂದಣಿಯ ಅಗತ್ಯತೆ, ಸರ್ಕಾರದಿಂದ ಲಭ್ಯವಾಗುವ ಉದ್ಯೋಗ ಮಾಹಿತಿ, ಕೌಶಲ್ಯಾಭಿವೃದ್ಧಿ ತರಬೇತಿಗಳು ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಉದ್ಯೋಗ ನೋಂದಣಿಯಿಂದ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳು ಮತ್ತು ಉದ್ಯೋಗ ಮಾರ್ಗದರ್ಶನದ ಬಗ್ಗೆ ವಿವರಿಸಿದರು. ಅಭಿಯಾನದ ವೇಳೆ ವಿದ್ಯಾರ್ಥಿಗಳಿಗೆ ಆನ್ಲೈನ್ ನೋಂದಣಿ ವಿಧಾನ, ದಾಖಲೆ ಸಲ್ಲಿಕೆ ಪ್ರಕ್ರಿಯೆ, ನೋಂದಣಿಯ ನವೀಕರಣ ವಿಧಾನ ಹಾಗೂ ಉದ್ಯೋಗ ಸಂಬಂಧಿತ ಸಂದೇಹಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಯಿತು. ಪದವಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಕ್ಷಣವೇ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಿತ್ಯಾನಂದ ವಿ ಗಾಂವಕರ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಉದ್ಯೋಗಾವಕಾಶಗಳ ಕುರಿತು ಮುಂಚಿತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮವನ್ನು ಕಾಲೇಜಿನ ಪ್ಲೇಸ್ಮೆಂಟ್ ಸೆಲ್ನ ಸಂಚಾಲಕರಾದ ದಿನೇಶ್ ಎಂ ಅವರು ಸಮನ್ವಯಗೊಳಿಸಿ ಈ ಅಭಿಯಾನದಿಂದ ವಿದ್ಯಾರ್ಥಿಗಳಲ್ಲಿ ಉದ್ಯೋಗದ ಬಗ್ಗೆ ಜಾಗೃತಿ ಹೆಚ್ಚಿದ್ದು, ಅಧಿಕೃತ ಉದ್ಯೋಗ ಸಲಹಾ ಸೇವೆಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಭವಿಷ್ಯದ ವೃತ್ತಿಜೀವನಕ್ಕೆ ತಯಾರಾಗಲು ಮಹತ್ವದ ವೇದಿಕೆಯಾಯಿತು ಎಂದು ಹೇಳಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಬಿಂದು ಟಿ, ಉಪನ್ಯಾಸಕರಾದ ಅರವಿಂದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಉದ್ಯೋಗ ವಿನಿಮಯ ಕೇಂದ್ರದ ಸಿಬ್ಬಂದಿಗಳಾದ ಯಜ್ಞೇಶ್ ಮತ್ತು ಸುದರ್ಶನ್ ಸಹಕರಿಸಿದರು. ವಿದ್ಯಾರ್ಥಿಗಳಾದ ಲಾವಣ್ಯ ಸ್ವಾಗತಿಸಿ, ಪ್ರಜೀತ್ ಶೆಟ್ಟಿ ವಂದಿಸಿ, ದೀಪಾಲಿ ನಿರೂಪಿಸಿದರು.




By
ForthFocus™