ಉಡುಪಿ, ಡಿ.11: ಡಿಸೆಂಬರ್14 ರಂದು ಶೀರೂರು ಪರ್ಯಾಯದ ಧಾನ್ಯ ಮುಹೂರ್ತ ಮತ್ತು ಕಟ್ಟಿಗೆ ರಥದ ಶಿಖರ ಪ್ರತಿಷ್ಠೆ ನಡೆಯಲಿದ್ದು ಜನವರಿ 9 ರಂದು ಭಾವೀ ಪರ್ಯಾಯ ಪೀಠಾಧಿಪತಿ ವೇಧವರ್ಧನ ತೀರ್ಥ ಸ್ವಾಮೀಜಿಯವರ ಪುರಪ್ರವೇಶ ನಡೆಯಲಿದೆ ಎಂದು ಶೀರೂರು ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರ್ ರತ್ನಾಕರ್ ಹೆಗ್ಡೆ ತಿಳಿಸಿದರು. ಮಠದ ದಿವಾನರಾದ ಡಾ. ಉದಯ ಸರಳತ್ತಾಯ ಮಾತನಾಡಿ, ಪರ್ಯಾಯದ ಪೂರ್ವಭಾವಿಯಾಗಿ ನಡೆಯುವ 4 ಮುಹೂರ್ತಗಳಲ್ಲಿ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ ಮತ್ತು ಕಟ್ಟಿಗೆ ಮುಹೂರ್ತ ನಡೆದಿದ್ದು ಭಾನುವಾರದಂದು ಬೆಳಿಗ್ಗೆ 7.45 ಧಾನ್ಯ ಮುಹೂರ್ತ ಅಥವಾ ಭತ್ತ ಮುಹೂರ್ತ ನಡೆಯಲಿದೆ. ಬೆಳಿಗ್ಗೆ 6.15ಕ್ಕೆ ದೇವತಾ ಪ್ರಾರ್ಥನೆ ಬಳಿಕ ಧಾನ್ಯ ತುಂಬಿದ ಚೀಲಗಳನ್ನು ವಿವಿದ ಬಿರುದು ಬಾವಲಿಗಳೊಂದಿಗೆ ರಥಬೀದಿಯಲ್ಲಿ ಸಾಗಿ ಅನಂತೇಶ್ವರ ಚಂದ್ರಮೌಳೀಶ್ವರ ಶ್ರೀ ಕೃಷ್ಣ ಮುಖ್ಯಪ್ರಾಣ ಗರುಡ ದೇವರು ಮತ್ತು ಮಧ್ವಾಚಾರ್ಯರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಬಡಗು ಮಾಳಿಗೆಗೆ ತಲುಪಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೊರೆಕಾಣಿಕೆ ಸಮಿತಿ ಸಂಚಾಲಕ ಸುಪ್ರಸಾದ್ ಶೆಟ್ಟಿ, ಸ್ವಾಗತ ಸಮಿತಿ ಕಾರ್ಯದರ್ಶಿ ಮೋಹನ್ ಭಟ್, ಮಧುಕರ್ ಮುದ್ರಾಡಿ, ಪ್ರಚಾರ ಸಮಿತಿಯ ಸಂಚಾಲಕ ನಂದನ್ ಜೈನ್ ವಾಸುದೇವ ಆಚಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




By
ForthFocus™