ಕಾಪು, ನ.3: ಉಡುಪಿಯ ತಂಡವೊಂದು ಅನಂತೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ವಾದಿರಾಜ ಶೇಟ್ ಇವರ ನೇತೃತ್ವದಲ್ಲಿ ಪ್ರತಿ ತಿಂಗಳ ಮೊದಲ ಭಾನುವಾರದಂದು ಜಿಲ್ಲೆಯ ಆಸುಪಾಸಿನ ದೇಗುಲಗಳಿಗೆ ಪಾದಯಾತ್ರೆಯ ಮೂಲಕ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುತ್ತಾರೆ.
ಟೆಂಪಲ್ ವಾಕ್ ನಲ್ಲಿ ಭಾಗಿಯಾದರೆ ಆರೋಗ್ಯ ಮತ್ತು ಆದ್ಯಾತ್ಮಿಕ ನೆಲೆಯಲ್ಲಿ ಸದಸ್ಯರಿಗೆ ಹುಮ್ಮಸ್ಸು ದೊರೆಯುತ್ತದೆ ಎಂಬುವುದು ಈ ತಂಡದ ಮೂಲ ಉದ್ದೇಶ. ಈಗಾಗಲೇ ಜಿಲ್ಲೆಯ ಪ್ರಸಿದ್ಧ ದೇಗುಲಗಳಿಗೆ ನಡಿಗೆಯ ಮೂಲಕ ಕ್ರಮಿಸಿ 128 ಪಾದಯಾತ್ರೆಯನ್ನು ಪೂರೈಸಿರುವ ತಂಡದಲ್ಲಿ 60 ಜನರಿಗೂ ಮಿಕ್ಕ ಸದಸ್ಯರಿದ್ದಾರೆ.
ಇತ್ತೀಚಿಗಷ್ಟೇ ಲೋಕಾರ್ಪಣೆಗೊಂಡು ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ಕ್ಷೇತ್ರ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ನವೆಂಬರ್ 2ರ ಭಾನುವಾರ 40 ಜನರ ತಂಡ ಪಾದಯಾತ್ರೆಯಲ್ಲಿ ಆಗಮಿಸಿ ಶ್ರೀದೇವಿಯ ದರ್ಶನ ಪಡೆದರು. ಪಾದಯಾತ್ರೆಯಲ್ಲಿ ಮಣಿಪಾಲದಲ್ಲಿ ವ್ಯಾಸಂಗ ಮಾಡುತ್ತಿರುವ ಅರುಣಾಚಾಲ ಪ್ರದೇಶದ ವಿದ್ಯಾರ್ಥಿನಿ ಭಾಗಿಯಾಗಿದ್ದಳು.
ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಟೆಂಪಲ್ ವಾಕ್ ತಂಡದ ಹಿರಿಯ ಸದಸ್ಯರಾದ ಸತೀಶ್ ಬಂಗೇರ, ನಿತಿನ್ ಪೈ, ದಿನೇಶ್, ಸುಭಾಷ್ ನಾಯ್ಕ್ ದಂಪತಿ, ಕಾರ್ತಿಕ್ ಕಾಮತ್, ಶಿವಾನಂದ ಕಿಣಿ, ಅಮರನಾಥ್, ಸದಾನಂದ ಅಮೀನ್ ಮತ್ತು ತಿಲಕ್ ರಾಜ್ ಹಾಗೂ ಮತ್ತಿತರರು ಭಾಗಿಯಾಗಿದ್ದರು.




By
ForthFocus™