ಮಣಿಪಾಲ, ಜು.8: ಎಂತಹ ಕಷ್ಟದ ದಾರಿಯಿದ್ದರೂ ಆತ್ಮವಿಶ್ವಾಸದ ಪ್ರಯತ್ನಶೀಲತೆ ಮೊದಲ ಗೆಲುವಿದ್ದಂತೆ, ಅರ್ಧ ಸಾಧಿಸಿದಂತೆ, ಉಳಿದರ್ಧ ಆ ಪ್ರಯತ್ನಶೀಲತೆಯೇ ನಮ್ಮನ್ನು ಸಾಧಿಸುವಂತೆ ಪ್ರೇರೇಪಿಸುತ್ತದೆ ಎಂದು ತ್ರಿಷಾ ಸಮೂಹ ಶಿಕ್ಷಣ ಸಂಸ್ಥಗಳ ಸ್ಥಾಪಕರಾದ ಸಿ.ಎ. ಗೋಪಾಲಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು ವಿದ್ಯಾನಗರ ಇಲ್ಲಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸಿ.ಎ. ಫೌಂಡೇಶನ್, ಸಿ.ಎಸ್.ಇ.ಇ.ಟಿ. ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರಸಕ್ತ ಪ್ರಪಂಚವನ್ನು ಕಾಮರ್ಸ್ ಆಳುತ್ತಿದೆ. ಇದನ್ನು ಅರ್ಥಮಾಡಿಕೊಂಡು ಮುಂದಿನ ಸ್ಪರ್ಧಾತ್ಮಕ ಜಗತ್ತಿಗೆ ಕಾಮರ್ಸ್ ವಿದ್ಯಾರ್ಥಿಗಳು ಕೌಶಲ್ಯಭರಿತರಾಗಿ ಅಣಿಯಾಗುವ ಅಗತ್ಯವಿದೆ ಎಂದರು. ಸಿಎ ಫೌಂಡೇಶನ್, ಸಿಎ ಇಂಟರ್ಮೀಡಿಯೇಟ್, ಸಿಎ ಫೈನಲ್ ಪರೀಕ್ಷೆಗಳ ಬಗ್ಗೆ, ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷಗಳ ಬಗ್ಗೆಯೂ ವಿವರಣೆ ನೀಡಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಿರೀಚ್ ಅಕಾಡೆಮಿಯ ಸಂಸ್ಥಾಪಕ ಸಿ.ಎಸ್. ಸಂತೋಷ್ ಪ್ರಭು ಅವರು ಮಾತನಾಡಿ ವಿವಿಧ ವಾಣಿಜ್ಯ ಕ್ಷೇತ್ರಗಳಲ್ಲಿ ಬಹುಬೇಡಿಕೆಯ ಸಿ.ಎಸ್. ಬಗ್ಗೆ ಮಾಹಿತಿಯ ಕೊರತೆಯಿದೆ ಎಂದರು. ಸಿ.ಎಸ್. ವಿವಿಧ ಹಂತಗಳ ಪರೀಕ್ಷೆಗಳು ಹಾಗೂ ತಯಾರಿಯ ಬಗ್ಗೆ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಕಾಡೆಮಿಕ್ ಡೀನ್ ಡಾ.ಮಿಥುನ್ ಯು., ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ರವಿ ಜಿ. ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.




By
ForthFocus™