ಮಣಿಪಾಲ, ಆ.10: ದೇಶಪ್ರೇಮ ಎಲ್ಲರಲ್ಲಿ ಎಳವೆಯಿಂದಲೇ ಬೆಳೆಯಬೇಕು. ದೇಶದ ಬಗೆಗೆ ಪ್ರೇಮವನ್ನು ಹೊಂದಿದಾಗ ಮಾತ್ರ ಸಶಕ್ತ ಭಾರತದ ನಿರ್ಮಾಣ ಸಾಧ್ಯ. ಈ ಹಿನ್ನಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸುವ ಉದ್ದೇಶದಿಂದ ರೇಡಿಯೋ ಮಣಿಪಾಲ್ ನಲ್ಲಿ ಆಯೋಜಿಸಲಾದ ದೇಶಭಕ್ತಿಗೀತೆ ಸಮೂಹ ಗಾಯನ ಸ್ಪರ್ಧಾ ಕಾರ್ಯಕ್ರಮ ಅಭಿನಂದನೀಯ ಎಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇದರ ಸಹ ಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳ್ ಹೇಳಿದರು. ಅವರು ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮತ್ತು ಮಣಿಪಾಲ್ ಇನ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಹಯೋಗದಲ್ಲಿ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರವು ಸ್ವಾತಂತ್ರೋತ್ಸವದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಉಡುಪಿ ಜಿಲ್ಲಾಮಟ್ಟದ ದೇಶಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಣಿಪಾಲ್ ಇನ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಮ್ ಐ ಸಿ) ಸಂಸ್ಥೆಯ ನಿರ್ದೆಶಕರಾದ ಡಾ. ಪದ್ಮಾರಾಣಿ ಅವರು ಸ್ವಾಗತ ಮಾತುಗಳನ್ನಾಡಿ, ಇಂತಹ ಸ್ಪರ್ಧಾ ಕಾರ್ಯಕ್ರಮದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಉಡುಪಿ ಜಿಲ್ಲೆಯ ಒಟ್ಟು ಹನ್ನೊಂದು ಪ್ರೌಢಶಾಲಾ ವಿದ್ಯಾರ್ಥಿ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪ್ರಥಮ ಬಹುಮಾನವನ್ನು ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆ ಮಣಿಪಾಲ್, ದ್ವಿತೀಯ ಬಹುಮಾನವನ್ನು ಟಿ.ಎ. ಪೈ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಕುಂಜಿಬೆಟ್ಟು, ತೃತೀಯ ಬಹುಮಾನವನ್ನು ಜ್ಙಾನಸುಧಾ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಾರ್ಕಳ ಪಡೆದರು. ಸಮಧಾನಕರ ಬಹುಮಾನವನ್ನು ಸೈಂಟ್ ಫ್ರಾನ್ಸೀಸ್ ಝೇವಿಯರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಉದ್ಯಾವರ ಮತ್ತು ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡಕ ತಂಡ ಪಡೆದುಕೊಂಡಿತು. ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ. ರಶ್ಮಿ ಅಮ್ಮೆಂಬಳ ವಂದಿಸಿದರು. ಮಣಿಪಾಲ್ ಇನ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಂಸ್ಥೆಯ ವಿದ್ಯಾರ್ಥಿನಿ ಲೆರಿಸಾ ಡಿ’ಸೋಜ ನಿರೂಪಿಸಿದರು. ಸಿಬ್ಬಂದಿಗಳಾದ ಮಂಜುನಾಥ್ ಜಿ.ಹೆಚ್., ಮೋಹನದಾಸ್ ಪೈ, ಪೀಟರ್ ಡಿಸೋಜ, ಕುಶಲ್ ಕುಮಾರ್ ಬಿ., ಸುಧೀರ್ ಸಾಮಂತ್, ವಿನಾಯಕ್ ಅಂಕೋಲಾ ಮತ್ತಿತರರು ಸಹಕರಿಸಿದರು.




By
ForthFocus™