ಮಂಗಳೂರು, ಮಾ.2: ನಗರದ ರಥಬೀದಿಯಲ್ಲಿರುವ ಡಾ. ಪಿ. ದಯಾನಂದ ಪೈ – ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ವಿಜ್ಞಾನ ಸಂಘ ಮತ್ತು ವಿಜ್ಞಾನ ವಿಭಾಗಗಳ ವತಿಯಿಂದ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ವಿಜ್ಞಾನ ಲೇಖಕಿ ಹಾಗೂ ಪರಿಸರವಾದಿ ಸರೋಜಾ ಪ್ರಕಾಶ್ ಅವರು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಹಿನ್ನೆಲೆಯನ್ನು ಮತ್ತು ಪ್ರಸಕ್ತ ವರ್ಷದ ಮುಖ್ಯ ವಿಷಯವಾದ “ವಿಜ್ಞಾನದಲ್ಲಿ ಮಹಿಳೆಯರು- ವಿಕಸಿತ ಭಾರತಕ್ಕೆ ಕೊಡುಗೆ” ಎಂಬುದರ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ., ಅವರು ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮಹಿಳೆಯರಿಗೆ ಲಭ್ಯವಿರುವ ಅವಕಾಶಗಳು ಮತ್ತು ಪ್ರೋತ್ಸಾಹದ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವದ ಜೊತೆಗೆ ಸಂಶೋಧನಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಐಕ್ಯೂಎಸಿ ಸಹ ಸಂಯೋಜಕಿ ಡಾ.ಜ್ಯೋತಿ ಪ್ರಿಯಾ, ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಅಶೋಕ್ ಸಿ ಎಚ್, ಪ್ರೊ. ಕೃಷ್ಣಪ್ರಭಾ, ರಘುಪತಿ, ಡಾ. ಮೋಹನ್ದಾಸ್ ಮತ್ತು ಇತರ ಉಪನ್ಯಾಸಕರು ಉಪಸ್ಥಿತರಿದ್ದರು.
ವಿಜ್ಞಾನ ಸಂಘದ ಸಂಚಾಲಕ ಡಾ. ರಮಾಕಾಂತ್ ಪುರಾಣಿಕ್ ವಿಜ್ಞಾನ ದಿನದ ಪ್ರತಿಜ್ಞೆಯನ್ನು ಬೋಧಿಸಿದರು. ವಿಜ್ಞಾನ ದಿನಾಚರಣೆಯ ಭಾಗವಾಗಿ ವಿದ್ಯಾರ್ಥಿಗಳಿಗೆ “ವಿಜ್ಞಾನದಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯದ ಬಗ್ಗೆ ಏರ್ಪಡಿಸಲಾಗಿದ್ದ ಡಿಜಿಟಲ್ ಪೋಸ್ಟರ್ ರಚನೆ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಾದ ಶ್ರೀಶ ಪ್ರಾರ್ಥಿಸಿ, ವೈಶಾಖ್ ಸ್ವಾಗತಿಸಿ, ತೇಜಸ್ವಿನಿ ನಿರೂಪಿಸಿದರು. ಶರಣ್ಯ ವಂದಿಸಿದರು.




By
ForthFocus™