ಮಂಗಳೂರು, ಆ.6: ವಿದ್ಯುತ್ ಸರಬರಾಜು ನಿಗಮಗಳ ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲು, ಗ್ರಾಹಕರಿಂದಲೇ ಸರ್ಕಾರ ಹಣ ವಸೂಲಿ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಮರೋಳಿ-ಜೋಡುಕಟ್ಟೆ ಬಳಿ ಇರುವ ಮೆಸ್ಕಾಂ ಕಚೇರಿ (ಕುಲಶೇಖರ ಉಪವಿಭಾಗ) ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, ನೌಕರರ ಪಿಂಚಣಿ ಹಾಗೂ ಗ್ರಾಚುಟಿಗೆ ನಮ್ಮ ವಿರೋಧವಿಲ್ಲ, ಖಂಡಿತವಾಗಿಯೂ ಅವರಿಗೆ ನೀಡಲೇಬೇಕು. ಅದು ರಾಜ್ಯ ಸರ್ಕಾರದ ಜವಾಬ್ದಾರಿ ಹೊರತು ಜನಸಾಮಾನ್ಯರದ್ದಲ್ಲ. ಸರ್ಕಾರ ತನ್ನ ಮೇಲಿನ ಹೊಣೆಯನ್ನು ಗ್ರಾಹಕರ ಮೇಲೆ ಹೊರಿಸಿದ್ದರಿಂದ ಸಹಜವಾಗಿ ಜನರು ಆಕ್ರೋಶಗೊಂಡಿದ್ದಾರೆ. ಯೂನಿಟಿಗೆ 36 ಪೈಸೆ ಹೆಚ್ಚಳದಂತೆ ಪ್ರತಿ ಮನೆಯಿಂದ ನೂರಾರು, ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿರುವುದು ಖಂಡನೀಯ. ಎರಡು ಸಾವಿರಕ್ಕೆ ಸಿಗುತ್ತಿದ್ದ ಸ್ಮಾರ್ಟ್ ಮೀಟರನ್ನು ಹತ್ತು ಸಾವಿರಕ್ಕೆ ಏರಿಕೆ ಮಾಡಿದ್ದು ಯಾಕೆ? ಜನಪರ ಹೋರಾಟಕ್ಕೆ ಬಿಜೆಪಿಯು ಸದಾ ಬೆಂಬಲ ನೀಡುತ್ತದೆ ಎಂದರು.
ಪ್ರತಿಭಟನೆಯಲ್ಲಿ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಪೂರ್ಣಿಮಾ, ವಸಂತ ಜೆ ಪೂಜಾರಿ, ನಿತಿನ್ ಕುಮಾರ್, ರವಿಶಂಕರ್ ಮಿಜಾರ್, ಮೋನಪ್ಪ ಭಂಡಾರಿ, ನಿಕಟಪೂರ್ವ ಮನಪಾ ಸದಸ್ಯರುಗಳು, ಮಂಡಲ ಹಾಗೂ ಜಿಲ್ಲೆಯ ಬಿಜೆಪಿ ಪ್ರಮುಖರು, ವಿವಿಧ ಮೋರ್ಚಾಗಳ ಪ್ರಮುಖರು, ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.




By
ForthFocus™