ಮಲ್ಪೆ, ನ.20: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ಗ್ರಂಥಾಲಯ ವಿಭಾಗ ಮತ್ತು ಐಕ್ಯೂಎಸಿ ಆಶ್ರಯದಲ್ಲಿ 2025-26 ನೇ ಸಾಲಿನ ಓದುಗರ ವೇದಿಕೆ ‘ಅಭಿರುಚಿ’ ಯನ್ನು ಗ್ರಂಥಲಯ ಸಂಪನ್ಮೂಲಗಳ ಅತ್ಯುತ್ಕೃಷ್ಟ ಬಳಸಿಕೊಳ್ಳುವ ಆಯ್ದ ವಿದ್ಯಾರ್ಥಿಗಳಾದ ಪರಶುರಾಮ , ಜ್ಯೋತಿ, ಪ್ರಜಿತ್, ಪಲ್ಲವಿ ಹಾಗೂ ವಾಣಿಶ್ರೀ ಇವರಿಂದ ಉದ್ಘಾಟನೆಗೊಂಡಿತು. ಉದ್ಘಾಟಕರಲ್ಲೊಬ್ಬರಾದ ಎಂ.ಎ. ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ ಜ್ಯೋತಿ ಮಾತನಾಡುತ್ತಾ, ವಿದ್ಯಾರ್ಥಿ ದಿಸೆಯಲ್ಲಿ ಕೇವಲ ಬಿಡುವಿನ ವೇಳೆಯನ್ನಾದರೂ ಗ್ರಂಥಾಲಯದಲ್ಲಿ ಕಳೆದರೆ ಖಂಡಿತ ಶೈಕ್ಷಣಿಕ ಬದುಕು ಉಜ್ವಲವಾಗಬಲ್ಲದೆಂದರು. ಇನ್ನೋರ್ವವ ವಿದ್ಯಾರ್ಥಿನಿ ವಾಣಿಶ್ರೀ ಕೂಡ ತನ್ನ ಗ್ರಂಥಾಲಯ ಓದಿನ ಅನುಭವ ಹಂಚಿಕೊಂಡರು.
ಐಕ್ಯುಎಸಿ ಸಂಚಾಲಕರಾದ ಡಾ. ವಿಷ್ಣುಮೂರ್ತಿ ಪ್ರಭು ಓದುವ ಹವ್ಯಾಸ ನಮ್ಮನ್ನು ಆಧುನಿಕತೆಗೆ ತೆರೆದುಕೊಳ್ಳುವಂತೆ ಪ್ರೇರೇಪಿಸುತ್ತದೆಯೆಂದರೆ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವಕರ ಓದುವ ಹವ್ಯಾಸ ನಮ್ಮ ಬದುಕನ್ನು ಸಾರ್ಥಕಗೊಳಿಸುವುದರ ಜೊತೆಗೆ ನಮ್ಮ ಸಂತೋಷ-ನೆಮ್ಮದಿಯನ್ನು ಹೆಚ್ಚಿಸುತ್ತದೆಯೆಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ರಾಜ್ಕುಮಾರ್, ಸಂದೇಶ್ ಹಾಗೂ ಓದುಗರ ವೇದಿಕೆಯ ಸಂಚಾಲಕರೂ ಹಾಗೂ ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ ಗ್ರಂಥಾಲಯ ಸಹಾಯಕಿ ಪ್ರಮೀಳಾ, ಬೋಧಕ- ಬೋಧಕೇತರ ವೃಂದದವರ ಜೊತೆಗೆ ವಿವಿಧ ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು.
ರಾಜಕೀಯಶಾಸ್ತ್ರ ಸಹಪ್ರಧ್ಯಾಪಕ ಪ್ರಶಾಂತ್ ನೀಲಾವರ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ಸಹಪ್ರಾಧ್ಯಾಪಕ ಉಮೇಶ್ ಪೈ ವಂದಿಸಿದರು. ಇಂಗ್ಲೀಷ್ ಸ್ನಾತಕೋತ್ತರ ವಿದ್ಯಾರ್ಥಿನಿ ಪಲ್ಲವಿ ಕೊಡಗು ಕಾರ್ಯಕ್ರಮ ನಿರೂಪಿಸಿದರು. ಪ್ರತಿ ವಾರ ವಿವಿಧ ಸ್ನಾತಕೋತ್ತರ ಮತ್ತು ಪದವಿ ವಿಭಾಗಗಳಿಂದ ಕಾವ್ಯವಾಚನ- ಪುಸ್ತಕ ವಿಮರ್ಶೆ, ರಸಪ್ರಶ್ನೆ, ಕಾದಂಬರಿ ವಿಮರ್ಶೆ, ದಿನಪತ್ರಿಕೆಗಳ ಮಹತ್ವ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದು ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ ತಿಳಿಸಿದರು.




By
ForthFocus™