ಮಣಿಪಾಲ, ನ.7: ನಮ್ಮ ಜೀವನದಲ್ಲಿರುವ ಎಲ್ಲಾ ರೀತಿಯ ಆಸೆ ಆಕಾಂಕ್ಷೆ, ಕನಸುಗಳನ್ನು ಸಿಗುವ ಅವಕಾಶಗಳಿಂದ ಈಡೇರಿಸಿಕೊಳ್ಳುವುದರ ಜೊತೆಗೆ, ದೇಶ ಸೇವೆಯ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಶಿಸ್ತು, ಸಂಯಮ, ಮನಸ್ಸಿನ ನಿಗ್ರಹ ನಮ್ಮ ಹತೋಟಿಗೆ ಬರುವುದು ಶಿಕ್ಷಣದಿಂದ ಮಾತ್ರ. ಅದರೊಂದಿಗೆ ಎನ್.ಸಿ.ಸಿ ಯಂತಹ ಅತ್ಯುತ್ತಮ ಸಂಘಟನೆಯನ್ನು ಸೇರುವ ಮೂಲಕ ಮಕ್ಕಳಲ್ಲಿ ದೇಶಭಕ್ತಿಯ ಭಾವವನ್ನು ಉನ್ನತೀಕರಿಸುತ್ತದೆ ಎಂದು ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟಿದ್ದಾರೆ. ಅವರು ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು ವಿದ್ಯಾನಗರದಲ್ಲಿ ನಡೆದ ಎನ್.ಸಿ.ಸಿ. ನೇವಿ(ನೌಕಾದಳ) ಉದ್ಘಾಟನೆಗೆ(ರೈಸಿಂಗ್ ಡೇ) ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಉದ್ಘಾಟನೆಗೆ ಆಗಮಿಸಿದ ಇನ್ನೋರ್ವ ಅತಿಥಿ ಕಮಾಂಡಿಂಗ್ ಆಫೀಸರ್ 6 KAR NU NCC ಉಡುಪಿಯ ಕಮಾಂಡರ್ ಅಶ್ವಿನ್ ಎಂ. ರಾವ್ ಅವರು ಮಾತನಾಡಿ, ಶ್ವೇತ ವರ್ಣದ ಸಮವಸ್ತ್ರ ಧರಿಸಿ ಬಂದಿರುವ ಎಲ್ಲಾ ಕೆಡಿಟ್ಗಳು ತಮ್ಮ ವ್ಯಕ್ತಿತ್ವವನ್ನು ಸಹ ಅದರಷ್ಟೇ ಉತ್ತಮವಾಗಿ ರೂಪಿಸಿಕೊಂಡು, ;ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ ಎಂಬ ಮಾತಿನಂತೆ ದೇಶಕ್ಕಾಗಿ ಕೊಡುಗೆ ನೀಡುತ್ತಾ ಕಲ್ಪವೃಕ್ಷದಂತೆ ಸಮಾಜಕ್ಕೆ ಮಾದರಿಯ ವ್ಯಕ್ತಿಗಳಾಗಿ ಬೆಳೆಯಿರಿ ಎಂದು ಶುಭಕೋರಿದರು. ಅತಿಥಿ ಗಣ್ಯರಲ್ಲಿ ಒಬ್ಬರಾದ ಸುಬೇದಾರ್ ಮೇಜರ್ ಗಣಪಯ್ಯ ಶೇರಿಗಾರ್ (ನಿವೃತ್ತ), ಅಧ್ಯಕ್ಷರು, ಮಾಜಿ ಸೈನಿಕರ ವೇದಿಕೆ, ಉಡುಪಿ ಜಿಲ್ಲೆ ಇವರಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಈ ನಾಡಿಗಾಗಿ, ಗಡಿಯ ರಕ್ಷಣೆಗಾಗಿ ಹಗಲಿರುಳು ದುಡಿಯುವ ದೇಶದ ಎಲ್ಲಾ ಸೈನಿಕರ ಪರವಾಗಿ ಸನ್ಮಾನಿಸಲಾಯಿತು. 6 KAR NU NCC ಉಡುಪಿಯ ಎಕ್ಸಿಕ್ಯೂಟಿವ್ ಆಫೀಸರ್ ಲೆಫ್ಟಿನೆಂಟ್ ಕಮಾಂಡರ್ ಎಂ. ಎ. ಮುಲ್ತಾನಿ, ಅತಿಥಿಗಳಾಗಿ ಭಾಗವಹಿಸಿದ್ದರು.
ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರುಗಳಾದ ಹೇಮಂತ್ ಹಾಗೂ ರವಿ ಜಿ ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ಶಮಿತ ಕಾರ್ಯಕ್ರಮ ನಿರೂಪಿಸಿದರು.




By
ForthFocus™