Home ಅಂಕಣ ದೇಶದ್ರೋಹ ಕಾನೂನು ಮುಂದುವರಿಯಬೇಕೇ?

ದೇಶದ್ರೋಹ ಕಾನೂನು ಮುಂದುವರಿಯಬೇಕೇ?

941
2

ದು ಇತ್ತೀಚಿಗೆ ಸುಪ್ರೀಂ ಕೋರ್ಟ್ ಎತ್ತಿರುವ ಮೂಲಭೂತ ಪ್ರಶ್ನೆ. “ದೇಶದ್ರೋಹ” ಎಂಬ ಪದ ಬಳಕೆಗೆ ಬಂದಿದ್ದೆ ವಸಾಹತುಶಾಹಿ ಆಳ್ವಿಕೆಯಲ್ಲಿ. ಅಂದರೆ ಅಂದು ಬ್ರಿಟಿಷರು ತಮ್ಮ ಆಡಳಿತಕ್ಕೆ ಭಂಗ ತರುವ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಸದೆ ಬಡಿಯುವ ನಿಮಿತ್ತ ದೇಶ ದ್ರೋಹ (sedition act) ಕಾಯಿದೆಯನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡರು. ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸ ನೋಡಿದಾಗ ಬ್ರಿಟಿಷರು ಇದನ್ನು ಮೊದಲು ಪ್ರಯೋಗಿಸಿದ್ದು ಬಾಲಗಂಗಾಧರ ತಿಲಕ್ ರ ಮೇಲೆ. ಅನಂತರ ಮಹಾತ್ಮ ಗಾಂಧಿ, ನೆಹರೂ ಮುಂತಾದ ಸ್ವಾತಂತ್ರ್ಯ ಹೋರಾಟಗಾರನ್ನು ಯಾವುದೇ ತನಿಖೆ ಇಲ್ಲದೆ ದೇಶ ದ್ರೋಹ ಅಪರಾಧದ ಅಡಿಯಲ್ಲಿ ಬಂಧಿಸಿ ಜೈಲಿಗೆ ತಳ್ಳಲಾಯಿತು.

ಈಗ ಘನವೆತ್ತ ನಮ್ಮ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡುತ್ತಿರುವುದು ಇದನ್ನೇ. ಇಂತಹ ಅಮಾನವೀಯ ಪದ ಬಳಕೆಯ ಕಾನೂನನ್ನು ಸ್ವಾತಂತ್ರ್ಯ ಸಿಕ್ಕಿ 75 ವರುಷಗಳ ಅನಂತರವೂ ಮುಂದುವರಿಸುವ ಅಗತ್ಯವಿದೆಯೆ ಅನ್ನುವುದನ್ನು ಕೇಂದ್ರ ಸರಕಾರ ಮರು ಚಿಂತನೆ ಮಾಡಲಿ ಅನ್ನುವ ಸಂದೇಶವನ್ನು ನೀಡಿದೆ.

ದೇಶದ್ರೋಹ ಕಾನೂನು ಸಂವಿಧಾನದಲ್ಲಿ ಅಡಕವಾಗದ ಪದ ಅನ್ನುವುದು ನಮಗೆ ತಿಳಿದಿರಬೇಕು. ಸಂವಿಧಾನ ಸಮಿತಿಯಲ್ಲಿ ಕೂಡ ಈ ಪದ ಬಳಕೆಯ ಕುರಿತಾಗಿ ಸಾಕಷ್ಟು ಚರ್ಚೆ ನಡೆದಿತ್ತು. ಅಂದು ಸಂವಿಧಾನ ಸಮಿತಿಯ ಸಭೆಯಲ್ಲಿ ಕೆ.ಎಂ.ಮುನ್ಸಿ ಹೇಳಿದ ಮಾತೆಂದರೆ “ಇದನ್ನು ಸಂವಿಧಾನದ ಯಾವ ಭಾಗದಲ್ಲೂ ಸೇರಿಸುವುದು ತರವಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪರ್ಯಾಯ ಅಸ್ತ್ರವೆಂದು ವ್ಯಾಖ್ಯಾನಿಸಿದ್ದರು. ಆಶ್ಚರ್ಯವೆಂಬಂತೆ ಸಂವಿಧಾನದಲ್ಲಿ ಇಲ್ಲದ ಪದ ನಮ್ಮ ಅಪರಾಧ ಕಾಯಿದೆಯ ಐ.ಪಿ.ಸಿ.ಯ 124 (A)ಸೆಕ್ಸನ್ ನಲ್ಲಿ ಭದ್ರವಾಗಿ ತಳವೂರಿಕೊಂಡಿತು. ಇದಕ್ಕೆ ಪೂರಕವೇ ಅನ್ನುವಂತೆ 1951ರಲ್ಲಿ ನೆಹರೂ ಸರಕಾರ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದು “ವಿಧಿ 19(1) ಅಭಿವ್ಯಕ್ತಿ ಸ್ವಾತಂತ್ರ್ಯ ಇದು ಸಮಗ್ರತೆ ಅಲ್ಲ (freedom of expression is not absolute but subject to some reasonable restriction) ಸಕಾರಣವಾಗಿ ಇತಿಮಿತಿಗಳಿಗೆ ಒಳಪಡಬೇಕು ಅನ್ನುವ ಮೊದಲ ಗಧಾ ಪ್ರಹಾರವಾಯಿತು. 1975ರ ತುರ್ತು ಪರಿಸ್ಥಿತಿಯಲ್ಲಿ ಇದನ್ನೇ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡ ದೃಷ್ಟಾಂತ ನಮ್ಮ ಮುಂದಿದೆ.

ಮುಂದೆ ಬಂದ ಸರಕಾರಗಳು ತಮಗೆ ಹೇಗೆ ಅನುಕೂಲವಾಗುತ್ತದೆ ಅದೇ ರೀತಿಯಲ್ಲಿ ಈ ದೇಶದ್ರೋಹ ಅಪರಾಧ ಕಾನೂನನ್ನು ದುರುಪಯೋಗ ಮಾಡಿಕೊಂಡ ಅಥವಾ ಸದ್ಬಳಕೆ ಮಾಡಿಕೊಂಡ ಹಲವು ಪ್ರಕರಣಗಳು ನಮ್ಮ ಮುಂದೆ ಜೀವಂತವಾಗಿದೆ. ಈ ದೇಶದ್ರೋಹ ಕಾನೂನು ಅಪ್ರಸ್ತುತ ಅನ್ನುವುದಕ್ಕೆ ಸುಪ್ರೀಂ ಕೋರ್ಟ್ ಕೊಟ್ಟ ಕಾರಣವೆಂದರೆ 2019ರ ಉದಾಹರಣೆಯಂತೆ “ಈ ಪ್ರಕರಣದಲ್ಲಿ ಅಪರಾಧ ಸಾಬೀತಾಗಿ ಶಿಕ್ಷೆಗೆ ಒಳಗಾದವರ ಪ್ರಮಾಣ ತೀರ ಕಡಿಮೆ ಹಾಗಾಗಿ ಇದು ಬರೇ ದುರ್ಬಳಕೆ ಆಗುತ್ತಿದೆಯೇ ಎಂಬ ಸಂಶಯದ ಪ್ರಶ್ನೆಯನ್ನು ಸರಕಾರದ ಮುಂದಿಟ್ಟಿದೆ ಅನ್ನುವುದು ಅಷ್ಟೇ ಸ್ವಷ್ಟ.

ಹಾಗಾದರೆ ಈ ದೇಶದ್ರೋಹ ತಡೆ ಕಾನೂನು ಈಗ ನಮಗೆ ಸಂಪೂರ್ಣವಾಗಿ ಅಪ್ರಸ್ತುತವೇ ಅನ್ನುವ ಪ್ರಶ್ನೆ ಕಾಡುವುದು ಸಹಜ ತಾನೇ? ಅಂದರೆ ನಾವೆಲ್ಲರೂ ನೂರಕ್ಕೆ ನೂರು ದೇಶಪ್ರೇಮಿಗಳೇ. ರಾಷ್ಟ್ರ ವಿರೋಧಿ ವಿಧ್ವಂಸಕ ಕೃತ್ಯದಲ್ಲಿ ತೊಡಗಿಲ್ಲ ಅನ್ನುವುದು ಖಚಿತವಾದರೆ ಇದು ಖಂಡಿತವಾಗಿಯೂ ಅಪ್ರಸ್ತುತ ಅನ್ನಿಸಿಕೊಳ್ಳುವುದು ಸಹಜ. ಇಲ್ಲಿ ಐ.ಪಿ.ಸಿ. 124 A ಬಳಸ ಬೇಕಾದ ಪರಿಸ್ಥಿತಿಯಲ್ಲಿ ಈ ದೇಶ ದ್ರೋಹ ಅನ್ನುವ ಪದಕ್ಕೆ ಸ್ವಷ್ಟವಾದ ನಿಖರವಾದ ಅರ್ಥ ಮತ್ತು ವ್ಯಾಖ್ಯಾನ ನೀಡಬೇಕಾದ ಅನಿವಾರ್ಯತೆ ಬಂದಿದೆ. ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಯಾವುದೇ ಸರಕಾರ ಅಥವಾ ಅಧಿಕಾರಸ್ಥರನ್ನು ಪ್ರಶ್ನಿಸುವ ಟೀಕಿಸುವ ಹಕ್ಕನ್ನು ಸಂವಿಧಾನವೇ ನೀಡಿದೆ. ಆದರೆ ದೇಶವನ್ನು ಬೈಯುವ, ಭದ್ರತೆಗೆ ಚ್ಯುತಿ ತರುವ, ಐಕ್ಯತೆ ಹಾಳು ಮಾಡುವ ಹಕ್ಕನ್ನು ಯಾವುದೇ ಪ್ರಜೆಗೆ ನೀಡಿಲ್ಲ ಅನ್ನುವುದನ್ನು ಸಂವಿಧಾನದ ಭಾಗ IV (A) ಅನುಚ್ಛೇದ 51 A ರ ಮೂಲಭೂತ ಕರ್ತವ್ಯದ ಅಡಿಯಲ್ಲಿ ಸ್ವಷ್ಟವಾಗಿ ಉಲ್ಲೇಖಿಸಿದೆ.”It is a moral &legal obligation of all citizens to help promote a spirit of patriotism & uphold the unity of the country”. ಅಂದರೆ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಗೌರವಿಸುವ ಮನಸ್ಥಿತಿ ನಮ್ಮಲ್ಲಿ ಹುಟ್ಟಿದ್ದೇ ಆದರೆ ಈ ದೇಶದ್ರೋಹ ಅಪರಾಧ ಕಾನೂನು ನೂರಕ್ಕೆ ನೂರು ಅಪ್ರಸ್ತುತ ಅನ್ನುವುದು ನನ್ನ ಖಚಿತ ಅಭಿಪ್ರಾಯ.

ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಬದಿಗಿಟ್ಟು ನಮ್ಮ ಕರ್ತವ್ಯಗಳನ್ನು ಪ್ರತಿಯೊಬ್ಬ ಪ್ರಜೆಯೂ ಅರ್ಥಮಾಡಿಕೊಂಡು ನಡೆದಿದ್ದೇ ಆದರೆ ಈ “ದೇಶದ್ರೋಹ” ಕಾನೂನು ಪದ ಈಗ ಪ್ರಸ್ತುತವೇ? ಅನ್ನುವ ಶ್ರೇಷ್ಠ ನ್ಯಾಯಾಂಗದ ಪ್ರಶ್ನೆಗೆ ಒಂದೇ ಉತ್ತರ “ಖಂಡಿತವಾಗಿಯೂ ಇದು ಅಪ್ರಸ್ತುತವಾದ ಕಾನೂನು” ಅನ್ನುವುದರಲ್ಲಿ ಎರಡು ಮಾತಿಲ್ಲ.

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ

2 COMMENTS

  1. ದೇಶದ ವಿರುದ್ಧ ಸೈನ್ಯದ ವಿರುದ್ಧ ಷಡ್ಯಂತ್ರ ಮಾಡುವವರ ಸಂಖ್ಯೆ ಸಾಕಷ್ಟು ಇರುವುದರಿಂದ ಇದನ್ನು ಮುಂದುವರಿಸಿಕೊಂಡು ಹೋಗುವುದೇ ಸೂಕ್ತ.

  2. ದೇಶದಲ್ಲಿ ಇದ್ದುಕೊಂಡು ,ದೇಶದ್ರೋಹವೆಸಗುವವರಿಗೆ ಏನು ಮಾಡಬೇಕು.ಯಾವ ರೀತಿಯ ಕಾನೂನು ಸೂಕ್ತ?ನಮ್ಮ ದೇಶದ ಎಲ್ಲ ಸೌಲಭ್ಯವನ್ನು ಪಡೆದುಕೊಂಡು ಇಲ್ಲಿನ ಪ್ರಜೆಗಳಿಗೆ ತೊಂದರೆ ಆದರೆ ಅದಕ್ಕೆ ಯಾರು ಹೊಣೆ???

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.