Home ಅಂಕಣ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿರುವ ಸವಾಲುಗಳು

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿರುವ ಸವಾಲುಗಳು

648
0

ರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿಯವರ ಮುಂದಿರುವ ಸವಾಲುಗಳೇನು? ಈ ಸವಾಲುಗಳನ್ನು ಎದುರಿಸುವಲ್ಲಿ ಬೊಮ್ಮಾಯಿಯವರು ಯಶಸ್ವಿಯಾಗಬಹುದೇ? ಮುಂತಾದ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬೊಮ್ಮಾಯಿಯವರ ರಾಜಕೀಯ ಹಿನ್ನಲೆ: ಬಸವರಾಜ್ ಬೊಮ್ಮಾಯಿಯವರು ರಾಜಕೀಯ ಕುಟುಂಬದಲ್ಲಿ ಪಳಗಿ ಬಂದವರು. ಅವರ ತಂದೆ ಎಸ್.ಆರ್.ಬೊಮ್ಮಾಯಿಯವರು ಕೂಡ ಅತ್ಯಂತ ಸಂದಿಗ್ದ ಪರಿಸ್ಥಿತಿಯಲ್ಲಿಯೇ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿ ಕೇವಲ ಒಂಬತ್ತು ತಿಂಗಳು ಅಧಿಕಾರ ನಡೆಸಿದವರು. ಆದರೂ ಇಂದಿಗೂ ಭಾರತದ ಸಂವಿಧಾನ ಓದುವ ವಿದ್ಯಾರ್ಥಿಗಳು ಅವರ ಹೆಸರನ್ನು ನೆನಪಿಸಲೇಬೇಕು. ಬಹುಮತ ಸಾಬೀತು ಪಡಿಸುವ ವಿಚಾರದಲ್ಲಿ ಅಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು “ಬೊಮ್ಮಾಯಿ”ಕೇಸು ಅಂತಲೇ ಇಂದಿಗೂ ಪ್ರಸಿದ್ಧಿಯಾಗಿದೆ.
ಅಂತಹ ಶ್ರೇಷ್ಠ ರಾಜಕಾರಣಿಯ ಸುಪುತ್ರ ಬಸವರಾಜ್ ಬೊಮ್ಮಾಯಿ ಮೂವತ್ತ ಮೂರು ವರ್ಷಗಳ ಅನಂತರ ತಮ್ಮ ತಂದೆ ಅಲಂಕರಿಸಿದ ಪೀಠವನ್ನೇ ಏರುವ ಸೌಭಾಗ್ಯ ಪಡೆದಿರುವುದು ರಾಜ್ಯದ ಮುಖ್ಯಮಂತ್ರಿಗಳ ಇತಿಹಾಸದಲ್ಲಿಯೇ ಎರಡನೇ ದಾಖಲೆ ಎಂದೇ ಪರಿಗಣಿಸಬಹುದು. ತಂದೆ ಮಗ ಮುಖ್ಯಮಂತ್ರಿಯಾದ ದಾಖಲೆಯನ್ನು ದೇವೇಗೌಡರು ಮತ್ತು ಕುಮಾರಸ್ವಾಮಿ ಪಾಲಿಗೆ ಒಲಿದಿದ್ದರೆ ಎರಡನೆಯ ಭಾಗ್ಯ ಬೊಮ್ಮಾಯಿ ಕುಟುಂಬಕ್ಕೆ ಒಲಿದು ಬಂದಿರುವುದಂತು ಸತ್ಯ.

ಬಸವರಾಜ್ ಬೊಮ್ಮಾಯಿರವರು ಮೂಲತ: ಇಂಜಿನಿಯರ್ ಪದವಿಧರರು. ಹುಬ್ಬಳ್ಳಿ ಪ್ರತಿಷ್ಠಿತ ಭೂಮರೆಡ್ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ವಿಭಾಗದಲ್ಲಿ ಪದವಿಗಳಿಸಿಕೊಂಡವರು. ಅನಂತರದಲ್ಲಿ ತಂದೆಯಂತೆ ರಾಜಕೀಯ ಕ್ಷೇತ್ರದಲ್ಲಿ ಮುಂದುವರಿದವರು. ಸದಾನಂದ ಗೌಡರ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿ ಹಾಗೇನೆ ಯಡಿಯೂರಪ್ಪನವರ ಕ್ಯಾಬಿನೆಟ್ನಲ್ಲಿ ಗೃಹ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ ಹಿರಿಯ ಅನುಭವ ಅವರಿಗಿದೆ.
ಅತ್ಯಂತ ಶಾಂತ ಸೌಮ್ಯ ಸ್ವಭಾವದ ನಿಧಾನ ಮಾತಿನ ವ್ಯಕ್ತಿತ್ವ ಹೊಂದಿರುವ ಬಸವರಾಜ್ ಎಲ್ಲರನ್ನೂ ಎಲ್ಲವನ್ನೂ ಸಮಾಧಾನದಿಂದ ಆಲಿಸುವ ಗುಣ ಅವರ ಮುಂದಿನ ಪ್ರಮುಖ ಸವಾಲುಗಳನ್ನು ಜವಾಬ್ದಾರಿಯನ್ನು ಹಗುರಗೊಳಿಸಬಹುದು ಅನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ.

ತಕ್ಷಣದ ಸವಾಲುಗಳು: ಪ್ರತಿಜ್ಞಾ ವಿಧಿ ಸ್ವೀಕರಿಸಿದ ತಕ್ಷಣವೇ ಬರುವ ಸವಾಲುಗಳೆಂದರೆ ಸಚಿವರ ನೇಮಕ. ಈ ಸವಾಲುಗಳು ಬಂದಾಗ ಸುಲಭವಾಗಿ ದೆಹಲಿಯತ್ತ ಕೈ ತೋರಿಸುವುದೊಂದೇ ಅವರ ಮುಂದಿನ ದಾರಿ. ಯಾಕೆಂದರೆ ಸಚಿವ ಖಾತೆ ಹಂಚಿ ಹಾಕುವುದು ಸುಲಭವಂತೂ ಖಂಡಿತವಾಗಿಯೂ ಅಲ್ಲ. ಈಗಾಗಲೇ ಹಲವು ಬಣಗಳು ತಲೆ ಎತ್ತಿ ನಿಂತಿದ್ದಾವೆ. ಯಡಿಯೂರಪ್ಪ ಬಣ; ಗೌಡರ ಬಣ; ಹಿಂದುಳಿದ ಬಣ. ವಲಸಿಗರ ಬಣ; ಹಿರಿಯರ ಬಣ; ಕಿರಿಯರ ಬಣ. ಜಾತಿ ಪ್ರಾದೇಶಿಕ ಬಣ.. ಒಂದೇ ಎರಡೇ.. ಈ ಎಲ್ಲಾ ಬಣಗಳ ಒತ್ತಡದಲ್ಲಿ ಬೊಮ್ಮಾಯಿ ಬಣ ಬಣವಾಗುವುದಂತೂ ಗ್ಯಾರಂಟಿ. ಅವರಿಗಿರುವ ಒಂದೇ ದಾರಿ ಹೈಕಮಾಂಡ್.

ರಾಜ್ಯದ ಹಣಕಾಸಿನ ವಿಚಾರವೂ ತೀರ ಹದಗೆಟ್ಟಿದೆ. ಪ್ರಕೃತಿ ವಿಕೋಪ, ಕೊರೊನಾ ಹಾವಳಿ, ರೈತರ ಸಮಸ್ಯೆ, ಉದ್ಯೋಗ ಸೃಷ್ಟಿ, ಇದನ್ನೆಲ್ಲವನ್ನೂ ಕೇವಲ ಒಂದು ವರುಷ ಒಂಭತ್ತು ತಿಂಗಳಲ್ಲಿ ನಿಭಾಯಿಸಿಕೊಂಡು ಹೋಗಲೇಬೇಕು. ಕಾರಣ 2023ರ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಜವಾಬ್ದಾರಿಯ ಯಡಿಯೂರಪ್ಪನವರ ಹೆಗಲಿನಿಂದ ಬೊಮ್ಮಾಯಿ ಹೆಗಲೇರಿದೆ ಅನ್ನುವುದು ಅಷ್ಟೇ ಸತ್ಯ.

ಒಂದು ವೇಳೆ ಮುಂದೆ ನಡೆಯುವ ಚುನಾವಣೆಗಳಲ್ಲಿ ಬಿಜೆಪಿ ಹಿನ್ನಡೆ ಕಂಡಿತ್ತು ಅಂದರೆ ಯಡಿಯೂರಪ್ಪನವರನ್ನು ಅಧಿಕಾರದಿಂದ ಇಳಿಸಿರುವುದೇ ಇದಕ್ಕೆ ಪ್ರಮುಖ ಕಾರಣವೆಂದು ಬಿಂಬಿಸಿದರೂ ಆಶ್ಚರ್ಯವಿಲ್ಲ. ಗೆದ್ದರೆ ಅದಕ್ಕೂ ಯಡಿಯೂರಪ್ಪನವರ ಬೆಂಬಲವೇ ಸ್ಪೂರ್ತಿ ಅನ್ನುವ ಕಾಣಿಕೆ ಸಲ್ಲಿಸಬೇಕಾದ ಸ್ಥಿತಿ ಬೊಮ್ಮಾಯಿವರದ್ದು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಬೊಮ್ಮಾಯಿವರಿಗೆ ಇನ್ನೊಂದು ಋಣವೂ ಇದೆ. ಅದೇನೆಂದರೆ ಯಡಿಯೂರಪ್ಪನವರ ಪುತ್ರ ವಿಜೇಂದ್ರರಿಗೊಂದು ಸರಿಯಾದ ಸ್ಥಾನ ತೋರಿಸಬೇಕಾದ ಹೊಣೆಗಾರಿಕೆ ಬೊಮ್ಮಾಯಿವರಿಗಿದೆ. ಇಲ್ಲವಾದಲ್ಲಿ ನೂತನ ಮುಖ್ಯಮಂತ್ರಿಗಳಿಗೆ ನಿದ್ರೆ ಬಾರದ ರಾತ್ರಿಗಳೇ ಜಾಸ್ತಿಯಾಗುವುದಂತೂ ಖಾತ್ರಿ.

ಒಂದಂತೂ ಸತ್ಯ, ಬೊಮ್ಮಾಯಿಯವರ ಮನೆಯೇ ಒಂದು ಸಂಸ್ಕಾಯುಕ್ತವಾದ ಕುಟುಂಬ. ಅವರ ಮಕ್ಕಳು ಕೂಡ ರಾಜಕೀಯವನ್ನೇ ವೃತ್ತಿಯಾಗಿ ಬೆಳೆಸಿ ಕೊಂಡವರಲ್ಲ ಅನ್ನುವುದು ಅವರ ಕುಟುಂಬದ ಇನ್ನೊಂದು ಧನಾತ್ಮಕವಾದ ವಿಚಾರ. ಬೊಮ್ಮಾಯಿವರ ಆಡಳಿತ ಎಲ್ಲಾ ಜಾತಿ ವರ್ಗ, ಪ್ರಾದೇಶಿಕತೆ ಮೀರಿ ಕನ್ನಡ ನಾಡು ಕಲ್ಯಾಣ ರಾಜ್ಯವಾಗಲಿ ಅನ್ನುವುದೇ ನಮ್ಮೆಲ್ಲರ ಹಾರೆೈಕೆಯೂ ಹೌದು.

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.