ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ವೇದಿಕೆಯಲ್ಲಿ ಭಾಗವಹಿಸಬಹುದೇ? ಸರಕಾರಿ ಕಾರ್ಯಕ್ರಮದ ನಿಯಮ ಮತ್ತು ಶಿಷ್ಟಾಚಾರದ ಪ್ರಕಾರ ಸರ್ಕಾರದ ಯಾವುದೇ ಅಧಿಕೃತ ಕಾರ್ಯಕ್ರಮದಲ್ಲಿ ಸರ್ಕಾರದ ಯಾವುದೇ ಸ್ಥಾನಮಾನ ಹೊಂದಿರದ ಪಕ್ಷದ ಕಾರ್ಯಕರ್ತರು ಭಾಗವಹಿಸುವುದು ಶಿಷ್ಟಾಚಾರದ ನಿಯಮದ ಪ್ರಕಾರ ಸರಿಯಲ್ಲ. ಮಾತ್ರವಲ್ಲ ಅವರ ಹೆಸರು ಕೂಡಾ ಆಮಂತ್ರಣ ಪತ್ರಿಕೆಯಲ್ಲಿ ಇಲ್ಲದೇ ಇರುವಾಗ ವೇದಿಕೆಯನ್ನು ಸ್ವೀಕರಿಸುವುದು ಸರಿ ಅಲ್ಲ. ಅಲ್ಲದೆ ಅಲ್ಲಿ ಸರಕಾರಿ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ಅವರೇ ಈ ಕಾರ್ಯಕ್ರಮದ ಸಂಘಟಕರು ಹೌದು. ಅದೇ ಖಾಸಗಿ ಕಾರ್ಯಕ್ರಮವಾಗಿದ್ದರೆ ಯಾರು ಕೂಡ ಭಾಗವಹಿಸಬಹುದು ಅಲ್ಲಿ ಸರ್ಕಾರಿ ಕಾರ್ಯಕ್ರಮದ ಶಿಷ್ಟಾಚಾರ ಪಾಲಿಸಬೇಕೆಂದೇನು ಇಲ್ಲ. ಅದೇ ಒಂದು ಪಕ್ಷದ ಕಾರ್ಯಕ್ರಮವಾಗಿದ್ದರೆ ಅಲ್ಲಿ ಕೂಡಾ ಸರಕಾರಿ ಅಧಿಕಾರಿಗಳು ಭಾಗವಹಿಸುವಂತಿಲ್ಲ.
ಆದರೆ ಇತ್ತೀಚೆಗೆ ಎಲ್ಲಾ ಪಕ್ಷದ ಕಾರ್ಯಕರ್ತರಿಂದ ಇದೊಂದು ಹೊಸ ಚಾಳಿ ಶುರುವಾಗಿದೆ. ನಮ್ಮ ಪಕ್ಷದ ಸರಕಾರ ನಮ್ಮದೇ ಸಚಿವರು ಅವರ ಹತ್ತಿರ ನಿಂತು ಪೇೂಸ್ ಕೊಡಬೇಕು. ಮರುದಿನವೇ ಅದು ಪತ್ರಿಕೆಯಲ್ಲಿ ಸುದ್ದಿಯಾಗಿ ಬರಬೇಕು ಅನ್ನುವ ಹೊಸ ಪ್ರಚಾರದ ಕಾಯಿಲೆ ಶುರುವಾಗಿದೆ. ನಮ್ಮ ಪತ್ರಕರ್ತರು ಇದನ್ನು ಸೂಕ್ಷ್ಮವಾಗಿ ಗಮನಿಸಿ ಅವರ ಹೆಸರು ಪ್ರಕಟವಾಗದಂತೆ ಗಮನಹರಿಸ ಬೇಕು. ಆಗ ಮಾತ್ರ ಈ ರೀತಿಯ ಹೊಸ ಚಾಳಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದೇನೋ? ನಿಜಕ್ಕೂ ನೇೂಡಿದರೆ ಸಂಬಂಧಿಸಿದ ಸಚಿವರುಗಳೇ ಪಕ್ಷದ ಕಾರ್ಯಕರ್ತರಿಗೆ ತಿಳಿಸಬೇಕು. ಇದನ್ನು ಅವರು ಹೇಳಲು ಸಿದ್ಧರಿಲ್ಲ. ಹಾಗಂತ ಸರಕಾರಿ ಅಧಿಕಾರಿಗಳಿಗೆ ಗೊತ್ತಿದೆ. ಆದರೆ ಈ ರಾಜಕೀಯ ಪಕ್ಷದವರನ್ನು ಸುಮ್ಮನೆ ಯಾಕೆ ಎದುರು ಹಾಕಿಕೊಳ್ಳಬೇಕೆಂಬ ಅಂಜಿಕೆಯೂ ಇರಬಹುದು. ಯಾಕೆ ಈ ಪ್ರಶ್ನೆ ತಮ್ಮ ಮುಂದೆ ಪ್ರಸ್ತುತಪಡಿಸಿದ್ದೇನೆ ಅಂದರೆ ಒಬ್ಬ ಸೂಕ್ಷ್ಮ ಬುದ್ಧಿಯ ಪತ್ರಕರ್ತರೊಬ್ಬರು ಈ ಪ್ರಶ್ನೆಯನ್ನು ನನ್ನ ಮುಂದಿಟ್ಟ ಕಾರಣ ಈ ಕುರಿತಾಗಿ ಮಾಹಿತಿ ನೀಡಬೇಕಾದ ಅನಿವಾರ್ಯತೆ ಬಂತು ಅಷ್ಟೇ. ಇಂತಹ ಶಿಷ್ಟಾಚಾರಗಳ ಕುರಿತಾಗಿ ಪಾಠ ಮಾಡಬೇಕಾಗಿಲ್ಲ, ತಿಳಿದು ಪಾಲಿಸುವುದು ರಾಜಕೀಯ ಪಕ್ಷಗಳ ನಾಯಕರ ಪ್ರಬುದ್ಧತೆಯ ಲಕ್ಷಣವೂ ಹೌದು
ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.




By
ForthFocus™