ಬೆಂಗಳೂರು, ನ.16: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆಗೆ ಕೆ.ಎಸ್.ಆರ್.ಟಿ.ಸಿಯ ನೂತನ ‘ಫ್ಲೈಬಸ್’ ಸೇವೆಗೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ, ಎಲ್ಲಾ ಫ್ಲೈಬಸ್ ಪ್ರಯಾಣಿಕರಿಗೆ ‘ನಂದಿನಿ’ ಉತ್ಪನ್ನಗಳ ಸ್ನ್ಯಾಕ್ಸ್ ಕಿಟ್ ವಿತರಿಸುವ ಉಪಕ್ರಮವನ್ನೂ ಉದ್ಘಾಟಿಸಲಾಯಿತು.

ಬಳಿಕ ಮಾತನಾಡಿದ ಅವರು, ಸಾರಿಗೆ ಸಚಿವನಾಗಿದ್ದ ನನ್ನ ಮೊದಲ ಅವಧಿಯಲ್ಲಿ, 2013ರಲ್ಲಿ ಮೈಸೂರಿಗೆ ಮೊದಲ ಫ್ಲೈಬಸ್ ಸೇವೆ ಆರಂಭಿಸಿದ್ದೆವು. ಆ ಬಳಿಕ ಮಡಿಕೇರಿ, ಕುಂದಾಪುರಕ್ಕೆ ವಿಸ್ತರಿಸಿ, ಇದೀಗ ದಾವಣಗೆರೆಗೂ ಈ ಜನಸ್ನೇಹಿ ಸೇವೆ ತಲುಪಿರುವುದು ಸಂತಸ ತಂದಿದೆ ಎಂದರು. ನವೆಂಬರ್ 15 ರಿಂದ, ಕೆ.ಎಂ.ಎಫ್ ಸಹಯೋಗದೊಂದಿಗೆ ಎಲ್ಲಾ ಫ್ಲೈಬಸ್ ಪ್ರಯಾಣಿಕರಿಗೆ ಉಚಿತವಾಗಿ ನಂದಿನಿ ಸ್ನ್ಯಾಕ್ಸ್ ಕಿಟ್ (ನೀರಿನ ಬಾಟಲಿ, ಫ್ಲೇವರ್ಡ್ ಮಿಲ್ಕ್, ಕುಕೀಸ್, ಕೇಕ್, ಕೋಡುಬಳೆ) ವಿತರಿಸಲಾಗುತ್ತಿದೆ.
ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ, ನಿರ್ದೇಶಕರಾದ ಡಾ. ಕೆ. ನಂದಿನಿ ದೇವಿ ಮತ್ತು ಇಬ್ರಾಹಿಂ ಮೈಗೂರ, ಕೆ.ಐ.ಎ.ಎಲ್ ನ ಮುಖ್ಯ ವಾಣಿಜ್ಯ ಅಧಿಕಾರಿ ಕೆನೆತ್, ಉಪಾಧ್ಯಕ್ಷ (ವಾಣಿಜ್ಯ) ಪ್ರವತ್, ವ್ಯವಸ್ಥಾಪಕ (ವಾಣಿಜ್ಯ) ಸಂಜಯ್ ಚಂದ್ರ, ಕೆ.ಎಂ.ಎಫ್ ನ ಸ್ವಾತಿ ರೆಡ್ಡಿ ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.




By
ForthFocus™