ಬೆಂಗಳೂರು, ಮೇ 17: ಕನಕದಾಸರು ಸಾಮಾಜಿಕ ಅವ್ಯವಸ್ಥೆಯನ್ನು ಸರಿಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರಿಂದ ಅವರನ್ನು ವಿಶ್ವಮಾನವರಾಗಿ ಕಾಣಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಆಯೋಜಿಸಿದ್ದ ಕನಕದಾಸರ ಸಮಗ್ರ ಸಾಹಿತ್ಯ ಅನುವಾದ ಸಂಪುಟಗಳ 40 ಕೃತಿಗಳ ಬಿಡುಗಡೆಗೊಳಿಸಿ, ಕನಕ ಶಿಲ್ಪವನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕನಕದಾಸರು ಭಕ್ತಿ ಪಂಥದ ಕವಿಯಷ್ಟೇ ಅಲ್ಲದೇ ಸಮಾಜದ ಅಂಕುಡೊಂಡುಗಳನ್ನು ತಿದ್ದುವ, ಮೂಢನಂಬಿಕೆಗಳ ವಿರುದ್ಧ ಕೆಲಸ ಮಾಡಿದ ಸಮಾಜ ಸುಧಾರಕರೂ ಹೌದು. ಇಂದಿಗೂ ಕನಕದಾಸರು ಹಾಗೂ ಬಸವಣ್ಣ ಬಯಸಿದ ಸಮಾಜ ನಿರ್ಮಾಣ ಆಗಿಲ್ಲ. ಸಮಸಮಾಜದ ಕನಸು ಕಂಡ ಇವರ ಬಗ್ಗೆ ಇಂದಿನ ಪೀಳಿಗೆ ಅರಿತುಕೊಳ್ಳುವುದು ಅವಶ್ಯ.
ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಅನೇಕ ಭಾಷೆಗಳಿಗೆ ತರ್ಜಮೆಯಾಗಿದ್ದು, ದಾಸ ಸಾಹಿತ್ಯವು ಅನೇಕ ಭಾಷೆಗಳಲ್ಲಿ ಪ್ರಚಾರವಾಗುತ್ತಿರುವುದು ಶ್ಲಾಘನೀಯ. ಕನಕದಾಸರ ಸಾಹಿತ್ಯ ಬೇರೆ ರಾಜ್ಯಗಳಿಗೂ ತಲುಪುತ್ತಿರುವುದು ಸಂತಸದ ಸಂಗತಿ. ಇತಿಹಾಸವನ್ನು ಅರಿಯದೆ ಹೋದರೆ ಸಮಾಜದ ಅಂಕುಡೊಂಕುಗಳನ್ನು ಅರಿಯಲು ಸಾಧ್ಯವಿಲ್ಲ.
ಕನಕದಾಸರು ಬಹುಮುಖಿ ಪ್ರತಿಭೆಯಾಗಿದ್ದರು. ಕನಕದಾಸರ ಸಾಹಿತ್ಯ ಸೃಷ್ಠಿ ಅದ್ಭುತವಾಗಿದ್ದು, 350 ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದ್ದಾರೆ. ಅವರ ಕೃತಿಗಳನ್ನು ಬೇರೆ ಭಾಷೆಗೆ ತರ್ಜುಮೆ ಮಾಡಿದ ಹಲವು ಭಾಷಾಂತರಕಾರರಿಗೆ ಸರ್ಕಾರದ ಪರವಾಗಿ ಅಭಿನಂದಿಸಲಾಗಿದೆ.
ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಕಾ.ತ.ಚಿಕ್ಕಣ್ಣ ಅವರ ನೇತೃತ್ವದಲ್ಲಿ ಕನಕದಾಸರ ಕೃತಿಗಳು 14 ಭಾಷೆಗೆ ಭಾಷಾಂತರಗೊಂಡಿದೆ. ಕನಕರ ಕೃತಿಗಳು ದೇಶ – ವಿದೇಶಗಳಿಗೆ ತಲುಪಲು ಇದು ಸಹಕಾರಿಯಾಗಿದೆ. ಈ ಪ್ರತಿಗಳ ಹೆಚ್ಚಿನ ಮುದ್ರಣಕ್ಕೆ ಸರ್ಕಾರ ಇನ್ನೂ ಹೆಚ್ಚಿನ ಅನುದಾನವನ್ನು ನೀಡಲಿದೆ.
ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕನಕದಾಸರ ಬಗ್ಗೆ ತಿಳಿಯುವುದು ಮುಖ್ಯ. ನಾನು ಶಾಸಕನಾದ ಸಂದರ್ಭದಿಂದಲೂ ಕನಕದಾಸ ಜಯಂತಿ ಆಚರಣೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.




By
ForthFocus™