Home ಸುದ್ಧಿಗಳು ಪ್ರಾದೇಶಿಕ ಸತ್ಸಂಗದಿಂದ ವ್ಯಕ್ತಿ ಸಮಾಜದ ಶಕ್ತಿಯಾಗುತ್ತಾನೆ: ಬಿ.ಎಲ್. ಸಂತೋಷ್

ಸತ್ಸಂಗದಿಂದ ವ್ಯಕ್ತಿ ಸಮಾಜದ ಶಕ್ತಿಯಾಗುತ್ತಾನೆ: ಬಿ.ಎಲ್. ಸಂತೋಷ್

785
0

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ ಇಂದು ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸಾಮಾಜಿಕ, ಧಾರ್ಮಿಕ, ವೈದ್ಯಕೀಯ, ಕಲಾಕ್ಷೇತ್ರ, ದೇಶ ಸೇವೆ, ಯೋಗ ಮುಂತಾದ ಕ್ಷೇತ್ರಗಳ ಸಾಧಕರಿಗೆ ಸನ್ಮಾನವನ್ನು ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯಲ್ಲಿ ನಾವು ದೇವರನ್ನು ಕಾಣುವಾಗ ಅದು ಧರ್ಮ ಅನ್ನಿಸಿಕೊಳ್ಳುತ್ತದೆ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷ್ ರವರು “ಹಿಂದೂ ಧರ್ಮದ ಸ್ಥಿತಿ ಗತಿಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ದೇವಸ್ಥಾನದ ಸತ್ಸಂಗದಿಂದ ವ್ಯಕ್ತಿಯಲ್ಲಿ ಚೈತನ್ಯ ಉಂಟಾಗಿ ತನ್ಮೂಲಕ ಆ ವ್ಯಕ್ತಿ ಸಮಾಜದ ಶಕ್ತಿಯಾಗುತ್ತಾನೆ. ಭಕ್ತ ಪ್ರಹ್ಲಾದನಿಗೆ ಸತ್ಯದ ಅರಿವಾಗಿದ್ದು ಇದೇ ಭಾರತದಲ್ಲಿ. ಪುಟ್ಟ ಬಾಲಕ ಧ್ರುವ ನಕ್ಷತ್ರವಾಗಬೇಕು ಎಂದು ಆಸೆಪಟ್ಟಿದ್ದು ಇದೇ ಭರತ ಖಂಡದಲ್ಲಿ. ಸತ್ಯದ ಪ್ರವಾಹವು ಉಕ್ಕಿ ಹರಿಯುತ್ತಿರುವ ಸನಾತನ ಧರ್ಮದಲ್ಲಿ ಬಹುತೇಕ ಸಾಧಕರು ಗಡಿಯನ್ನು ಮೀರಿ ಸಾಧನೆ ಮಾಡಿದ್ದಾರೆ.

ವಿಕ್ರಮ್ ಬಾತ್ರಾರಂತಹ ಸೈನಿಕರ ಅದಮ್ಯ ಇಚ್ಛಾಶಕ್ತಿ, ತ್ಯಾಗ, ಬಲಿದಾನ ನಮಗೆಲ್ಲರಿಗೂ ಸದಾ ಪ್ರೇರಣಾಶಕ್ತಿಯಾಗಿದೆ ಎಂದು ಬಿ.ಎಲ್. ಸಂತೋಷ್ ಹೇಳಿದರು. ಶಬರಿಯ ರಾಮಪ್ರೀತಿಯ ಬಗ್ಗೆ ಉಲ್ಲೇಖಿಸಿದ ಅವರು, ಹಿಂದೂ ಧರ್ಮ ಯಾವುದೇ ವ್ಯವಸ್ಥೆಗೆ ಸೀಮಿತವಾಗಿರಲಿಲ್ಲ, ಸಾಮಾನ್ಯ ಜನರು ತಮ್ಮ ಬದುಕಿನಲ್ಲಿ ಈ ಅವಿನಾಶಿ ಧರ್ಮವನ್ನು ಆಚರಿಸಿ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಅನಾದಿಕಾಲದಿಂದಲೂ ಪ್ರತಿ ಮನೆಯಲ್ಲಿ ಹಿರಿಯರು ಆಚರಣೆಯಿಂದ ಕಿರಿಯರಿಗೆ ಹಿಂದೂ ಧರ್ಮದ ಸತ್ವವನ್ನು ನೀಡಿದ್ದಾರೆ. ಇನ್ನೊಬ್ಬರು ಬದುಕಬೇಕು ಎಂಬ ಸಾಮಾಜಿಕ ಕಳಕಳಿ ತಾಯಂದಿರು ಮನೆಯಲ್ಲೇ ಮಗುವಿಗೆ ಕಲಿಸುತ್ತಾರೆ. ನಮಗಿರುವ ಸ್ವಾತಂತ್ರ್ಯದಿಂದ ಬೇರೆಯವರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಬಾರದು. ನಮ್ಮ ಸ್ವಾತಂತ್ರ್ಯ ಸೀಮಿತ ಚೌಕಟ್ಟಿನೊಳಗೆ ಇರಬೇಕು. ಆ ಕಾರಣದಿಂದ ಶ್ರೀರಾಮಚಂದ್ರ ಮರ್ಯಾದಾ ಪುರುಷೋತ್ತಮನಾದ.

ಶ್ರೀಕೃಷ್ಣ ಹೋದ ಕಡೆಗಳಲ್ಲೆಲ್ಲಾ ಒಳ್ಳೆಯದನ್ನು ರಕ್ಷಣೆ ಮಾಡಿ ಕೆಟ್ಟದನ್ನು ಶಿಕ್ಷಿಸಿದ. ಹಿಂದೂ ಧರ್ಮದ ಅಂತಃಸತ್ವವೇ ಇದು. ನಮ್ಮ ಬೆಳವಣಿಗೆಗೆ ಪೂರಕವಾಗಿರುವ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಜಾಗರೂಕ ಸಮಾಜಕ್ಕೆ ಕಾನೂನು ಸಹಕಾರಿಯಾಗುತ್ತದೆ.

ಭಯೋತ್ಪಾಸನೆ, ಪ್ರೀತಿ ಪ್ರೇಮದ ಹೆಸರಿನಲ್ಲಿ ನಡೆಯುವ ಮತಾಂತರ, ಭೂಕಬಳಿಕೆ ಇವುಗಳ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ದೊಡ್ಡ ನಷ್ಟ ಸಂಭವಿಸುವ ಸಾಧ್ಯತೆಯಿದೆ. ಸಂಸ್ಕೃತಿಯ ಹೆಸರಿನಲ್ಲಿ ವಿಕೃತಿ ಸಲ್ಲದು. ಒಗ್ಗಟ್ಟಾದರೆ ಮಾತ್ರ ಎಲ್ಲದಕ್ಕೂ ಉತ್ತರ ಸಿಗುತ್ತದೆ. ಕರ್ತವ್ಯದಿಂದ ವಿಮುಖರಾದರೆ ದೇವರೂ ಕ್ಷಮಿಸುವುದಿಲ್ಲ.

ಮನೆಯೊಳಗೆ ಮಾತೃಭಾಷೆಗೆ ಅಧಿಕ ಒತ್ತನ್ನು ನೀಡಬೇಕು ಎಂದ ಅವರು, ಊರನ್ನು ಸ್ವಚ್ಛಾವಾಗಿಡಿ, ಸೃಜನಶೀಲರಾಗಿ, ಆತ್ಮನಿರ್ಭರರಾಗಿ ಎಂದು ಕಾಶಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತನ್ನು ಉಲ್ಲೇಖಿಸಿದರು.

ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಹಿರಿಯರು ಕ್ರಿಯಾಶೀಲ ಪ್ರಯತ್ನವನ್ನು ನಡೆಸುವ ಮೂಲಕ ಕಿರಿಯರಲ್ಲಿ ಈ ಬಗ್ಗೆ ಅರಿವನ್ನು ಮೂಡಿಸಬೇಕು ಎಂದರು.

ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ಸ್ವಾಗತಿಸಿ, ಮಠದ ಆಸ್ಥಾನ ವಿದ್ವಾಂಸರಾದ ಕೃಷ್ಣರಾಜ ಭಟ್ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.