ಕೋಟ, ಆ.24: ದೇಶದ ಸುಭಿಕ್ಷೆಗೆ ಕೃಷಿ ಮತ್ತು ಹೈನುಗಾರಿಕೆ ಮೂಲ ಕಾರಣವಾಗಿದೆ ಎಂದು ಕೆ.ಎಂ.ಎಫ್ ವಿಸ್ತರಣಾಧಿಕಾರಿ ಉಮೇಶ್ ಕುಂದರ್ ಹೇಳಿದರು. ಸೋಮವಾರ ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇದರ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷರಾದ ವಲೇರಿಯನ್ ಡಿಸೋಜ ಅಧ್ಯಕ್ಷತೆ ವಹಿಸಿ ಸಾಮಾನ್ಯ ಸಭೆಯನ್ನು ನಡೆಸಿಕೊಟ್ಟರು. 25-26ನೇ ಸಾಲಿನಲ್ಲಿ ಸಂಘಕ್ಕೆ ಹೆಚ್ಚು ಹಾಲು ನೀಡಿ ಪ್ರಥಮ ಬಹುಮಾನ ಪಡೆದ ಜೂಡಿಪ್ ಪಿಕಾರ್ಡೋ ಇವರಿಗೆ ನಗದು ಇನ್ನುಳಿದ ಹೈನುಗಾರರಿಗೆ ಪರಿಕರ ರೂಪದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು. ಹಾಲು ಉತ್ಪಾದಕರಿಗೆ ಬೋನಸ್ ಹಾಗೂ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷೆ ಶ್ಯಾಮಲ ದೇವಾಡಿಗ, ನಿರ್ದೇಶಕರುಗಳಾದ ಜಲಜ ಬಿ ಪೂಜಾರಿ, ವಸುಧಾ ಪಿಎನ್ ಬಾಯರಿ, ಜಯಂತ ಪೂಜಾರಿ, ನಾಗರತ್ನ ಮಡಿವಾಳ, ಲಲಿತಾ ಪೂಜಾರಿ, ಡಯಾನಾ ಪಿಂಟೋ, ದಾಕ್ಷಾಯಿನಿ, ಮೈನಾ ಬಿ ಸಾಲಿಯಾನ್ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ಯಾಮಲ ಪಾಂಡೇಶ್ವರ ಸಂಘದ ನಡಾವಳಿ, ವರದಿ, ಲೆಕ್ಕಪತ್ರ, ಆಯವ್ಯಯ ವಾಚಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಹಾಯಕಿ ಸುಜಾತ ವೆಂಕಟೇಶ ಸಹಕರಿಸಿದರು.




By
ForthFocus™