ಕೋಟ, ಜೂ.18: ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರ ಕೋಟತಟ್ಟು ಗ್ರಾಮ ಪಂಚಾಯತ್, ನೆನಪು ಮೂವೀಸ್ ಹಾಗೂ ಉಸಿರು ಕೋಟ ಇವುಗಳ ಜಂಟಿ ಆಶ್ರಯದಲ್ಲಿ 5ನೇ ಕಾಲಮಿತಿ ಸಾಹಿತ್ಯ ಸಮ್ಮೇಳನ ʼನೆಲಗುಮ್ಮ- 2026ʼ (ಹನಿಯ ಚಿಲುಮೆ), ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರದ 2026 ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಕೋಟದ ಕಾರಂತ ಥಿಮ್ ಪಾರ್ಕ್ನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಸಮಾರಂಭದ ದೀಪ ಪ್ರಜ್ವಲನೆಯನ್ನು ವಿಶ್ರಾಂತ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಸೋಮಶೇಖರ ಶೆಟ್ಟಿ ಅವರು ನೆರವೇರಿಸಿದರು. ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಶಂಕರ ಶೆಟ್ಟಿ, ಕೊತ್ತಾಡಿ ವಡ್ಡರ್ಸೆ ಅವರು ಸಾಹಿತ್ಯದ ಅಗತ್ಯತೆ ಮತ್ತು ಚುಟುಕು ಸಾಹಿತ್ಯದ ಮಹತ್ವದ ಕುರಿತು ಆಶಯ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಅಧ್ಯಕ್ಷರೊಂದಿಗೆ ಮಹೇಶ್ ಹವಾಲ್ದಾರ್ ಹಾಗೂ ರೇವತಿ ತೆಕ್ಕಟ್ಟೆ ಅವರು ನಡೆಸಿಕೊಟ್ಟ ʼಚುಟುಕು ಸಂವಾದʼ ನೆರೆದಿದ್ದ ಸಾಹಿತ್ಯಾಸಕ್ತರ ಗಮನ ಸೆಳೆಯಿತು. ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರದ ನೂತನ ಸಾಲಿನ ಚಟುವಟಿಕೆಗಳಿಗೆ ಚಾಲನೆ ನೀಡಿದ ಕಾರಂತ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಆನಂದ ಸಿ. ಕುಂದರ್ ಅವರು ಯುವಜನರ ಬೌದ್ಧಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಇಂತಹ ಶಿಕ್ಷಣ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು. ವೇದಿಕೆಯಲ್ಲಿ ಆನಂದ ಸಿ. ಕುಂದರ್ , ಸುಶೀಲ ಸೋಮಶೇಖರ್, ಪ್ರಮೋದ ಹಂದೆ ಮತ್ತು ಶಿಕ್ಷಣ ಕೇಂದ್ರದ ಶಿಕ್ಷಕರು ಉಪಸ್ಥಿತರಿದ್ದರು.
ಆಕರ್ಷಕ ಚುಟುಕು ಕವಿಗೋಷ್ಠಿ: ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ನಡೆದ ಚುಟುಕು ಕವಿಗೋಷ್ಠಿಯಲ್ಲಿ ನಾಡಿನ ವಿವಿಧ ಭಾಗಗಳ ಹಲವಾರು ಕವಿಗಳು ಭಾಗವಹಿಸಿ ತಮ್ಮ ಚುಟುಕು ಕವನಗಳ ಮೂಲಕ ಸಾಹಿತ್ಯ ಸುಧೆ ಹರಿಸಿದರು. ಸುಮನ ಹೇರ್ಳೆ, ಚೇಂಪಿ ದಿನೇಶ್ ಮತ್ತು ಮಂಜುನಾಥ ಗುಂಡ್ಮಿ ಅವರು ಕವಿಗೋಷ್ಠಿಯ ಯಶಸ್ವಿ ನಿರ್ವಹಣೆ ಮಾಡಿದರು. ಈ ವಿಶಿಷ್ಠ ಸಾಹಿತ್ಯಿಕ ಸುದಿನಕ್ಕೆ ಸಾಕ್ಷಿಯಾಗಿ ಡಾ. ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸಂಯೋಜಕರುಗಳಾದ ಸುಬ್ರಾಯ ಆಚಾರ್, ಸತೀಶ್ ವಡ್ಡರ್ಸೆ , ಗಣ್ಯರು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.




By
ForthFocus™