ಕೋಟ, ಮೇ 24: ಕೃಷಿ ಭೂಮಿ ಹಡಿಲು ಬೀಳಲು ಬಿಡಬೇಡಿ ಎಂದು ಕೋಟ ರೈತಧ್ವನಿ ಸಂಘಟನೆಯ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ರೈತ ಸಮುದಾಯಕ್ಕೆ ಕರೆ ನೀಡಿದರು. ಶನಿವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಗೆಳೆಯರ ಬಳಗ ಕಾರ್ಕಡ, ರೈತಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸ್ನೇಹಕೂಟ ಮಣೂರು ಇವರುಗಳ ಸಹಯೋಗದೊಂದಿಗೆ ೫೪ನೇ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವ ಕೃಷಿಕ ಮಣೂರು ಬಾಳೆಬೆಟ್ಟು ಚಂದ್ರಕಾಂತ್ ಮಧ್ಯಸ್ಥರಿಗೆ ಪಂಚವರ್ಣ ರೈತ ಪುರಸ್ಕಾರ ನೀಡಿ ಗೌರವಿಸಲಾಯಿತು. ಪರಿಸರಸ್ನೇಹಿ ಪಾರಿಜಾತ ಗಿಡ ನೆಟ್ಟು ಗೋ ಪೂಜೆ ನೆರವೇರಿಸಲಾಯಿತು.
ಸಭಾಧ್ಯಕ್ಷತೆಯನ್ನು ಪಂಚವರ್ಣ ಸಂಘಟನೆಯ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಎಂ.ಎನ್ ಮಧ್ಯಸ್ಥ ಅಭಿನಂದನಾ ನುಡಿಗಳನ್ನಾಡಿದರು. ಮಣೂರು ಮಹಾಲಿಂಗೇಶ್ವರ ಸಭಾಂಗಣದ ಮುಖ್ಯಸ್ಥ ರಾಜೇಂದ್ರ ಉರಾಳ ಸನ್ಮಾನಿತರ ಪರವಾಗಿ ಮಾತನಾಡಿದರು. ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಉದ್ಘಾಟನೆ ನೆರವೇರಿಸಿದರು.
ಮುಖ್ಯ ಅಭ್ಯಾಗತರಾಗಿ ಸ್ನೇಹಕೂಟದ ನಿರ್ದೇಶಕ ವಿಷ್ಣುಮೂರ್ತಿ ಮಯ್ಯ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಸ್ನೇಹಕೂಟದ ಅಧ್ಯಕ್ಷೆ ಭಾರತಿ ವಿ ಮಯ್ಯ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಸನ್ಮಾನ ಪತ್ರವನ್ನು ಸ್ನೇಹಕೂಟದ ವಿನಯ ಉಡುಪ ವಾಚಿಸಿದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ ವಂದಿಸಿದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.




By
ForthFocus™