ಉಡುಪಿ, ಮೇ 22: ಸಂಜೀವಿನಿ ಯೋಜನೆಯಡಿ ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿರುವುದಕ್ಕೆ ಮತ್ತೊಂದು ಅತ್ಯುತ್ತಮ ಉದಾಹರಣೆ ಕುಂದಾಪುರ ತಾಲೂಕಿನ ಕಟ್ಬೆಲ್ತೂರು ಗ್ರಾಮದ ಭದ್ರ ಮಹಾಕಾಳಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ, ಮಹಾಸತಿ ಸಂಜೀವಿನಿ ಸ್ವಸಹಾಯ ಗುಂಪಿನ ಸಕ್ರಿಯ ಸದಸ್ಯೆ ಹಾಗೂ ಮಹಿಳಾ ಉದ್ಯಮಿಯಾದ ಶ್ರೀಮತಿ ಜಯಶ್ರೀ ಅವರು ತಯಾರಿಸಿದ ಹಲಸಿನ ಹಾಗೂ ಮಾವಿನ ಹಣ್ಣಿನ ವೈವಿಧ್ಯಮಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಬ್ರಹ್ಮಾವರದ ಎಸ್.ಎಂ.ಎಸ್. ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಪ್ರಸಿದ್ಧ ‘ಹಲಸು ಮೇಳ’ದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.
ಗ್ರಾಮೀಣ ಭಾಗದ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು, ಸಾಂಪ್ರದಾಯಿಕ ಮತ್ತು ಆಧುನಿಕ ಪದ್ಧತಿಗಳ ಸಮ್ಮಿಲನದೊಂದಿಗೆ ಹಲಸಿನ ಜಾಮ್, ಹಲಸಿನ ಉಪ್ಪಿನಕಾಯಿ, ಉಪ್ಪಡ್ ಪಚಡ್ ಹಾಗೂ ಮ್ಯಾಂಗೋ ಜಾಮ್ ಉತ್ಪನ್ನಗಳನ್ನು ಇವರು ಸಿದ್ಧಪಡಿಸಿದ್ದಾರೆ. ಸ್ಥಳೀಯವಾಗಿ ಸಿಗುವ ಹಲಸು ಮತ್ತು ಮಾವಿನ ಹಣ್ಣುಗಳಿಗೆ ಸೂಕ್ತ ಮೌಲ್ಯವರ್ಧನೆ ಮಾಡುವ ಮೂಲಕ, ಗ್ರಾಹಕರನ್ನು ಆಕರ್ಷಿಸುವ ಗುಣಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.
ಸಂಜೀವಿನಿ ಯೋಜನೆಯು ಗ್ರಾಮೀಣ ಮಹಿಳೆಯರ ಕೈ ಹಿಡಿದು ಮುನ್ನಡೆಸುತ್ತಿರುವುದಕ್ಕೆ ಈ ಯಶಸ್ಸೇ ಸಾಕ್ಷಿ. ಸ್ಥಳೀಯ ಹಣ್ಣುಗಳಿಗೆ ಮೌಲ್ಯವರ್ಧನೆ ನೀಡಿ ಉದ್ಯಮಿಯಾಗಿ ಬೆಳೆದಿರುವ ಜಯಶ್ರೀ ಅವರ ಸಾಧನೆ ಇತರ ಮಹಿಳೆಯರಿಗೆ ಪ್ರೇರಣೆಯಾಗಿದೆ,” ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳಾದ ಡಾ. ಧನಂಜಯ್ ಶ್ಲಾಘಿಸಿದರು.
ಮಹಿಳಾ ಉದ್ಯಮಿಯಾಗಿರುವ ಜಯಶ್ರೀ ಅವರನ್ನು ಈ ಹಿಂದೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಬೆಂಗಳೂರು) ಗುರುತಿಸಿ, ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲು ಅವಕಾಶ ಕಲ್ಪಿಸಿತ್ತು ಎಂಬುದು ಗಮನಾರ್ಹ.
ಇಂದು ಹಲಸು ಮೇಳದಲ್ಲಿ ಬಿಡುಗಡೆಗೊಂಡ ಈ ಉತ್ಪನ್ನಗಳಿಗೆ ಸಾರ್ವಜನಿಕರಿಂದ ಹಾಗೂ ಗ್ರಾಹಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಉತ್ತಮ ಬೇಡಿಕೆಯೂ ಕಂಡುಬಂದಿದೆ. ಸಂಜೀವಿನಿ ಒಕ್ಕೂಟದ ಬೆಂಬಲ ಮತ್ತು ಸ್ವಸಹಾಯ ಗುಂಪಿನ ಸಹಕಾರದಿಂದಾಗಿ ಗ್ರಾಮೀಣ ಮಟ್ಟದ ಉತ್ಪನ್ನವೊಂದು ಪ್ರಮುಖ ಮೇಳದಲ್ಲಿ ಗುರುತಿಸಿಕೊಳ್ಳುವಂತಾಗಿದೆ.
ಬ್ರಹ್ಮವಾರ ರೋಟರಿ ಕ್ಲಬ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್, ತಾಲೂಕು ವ್ಯವಸ್ಥಾಪಕರಾದ ಪ್ರಶಾಂತ್, ವಲಯ ಮೇಲ್ವಿಚಾರಕರಾದ ಮಹೇಂದ್ರ, ಹರ್ಷಿತಾ, ಸ್ವಾತಿ ಹಾಗೂ ತಾಲೂಕು ಅಭಿಯಾನ ಘಟಕದ ಸೀತಾರಾ, ಯಮುನಾ ಹಾಗೂ ಚೈತ್ರ ಉಪಸ್ಥಿತರಿದ್ದರು.




By
ForthFocus™