ಗಣಿತನಗರ, ಮೇ 17: ನಮ್ಮೆಲ್ಲರ ಬದುಕಿನ ಹೊರತಾಗಿ ಜನಪದವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಜನಪದರು ನಮ್ಮ ಬದುಕನ್ನು ತಿದ್ದಿ ತೀಡಿದರು. ಹಾಡಿನ ಮೂಲಕ ನಮ್ಮ ಬದುಕನ್ನು ತಿದ್ದಿದವರು ಜನಪದರು. ನಾವೆಲ್ಲರೂ ಒಂದು ಎನ್ನುವ ಭಾವವೇ ಜನಪದ. ಜನಪದರು ಓದದೆ ಬರೆಯದೆ ಕಾವ್ಯವನ್ನು ಕಟ್ಟುವ ಸಾಮರ್ಥ್ಯವನ್ನು ಹೊಂದಿದ್ದರು. ಜನಪದ ಉಳಿದರೆ ನಮ್ಮ ಕನ್ನಡ ಗಟ್ಟಿಯಾಗಿ ಉಳಿಯುತ್ತದೆ, ನಮ್ಮ ಸಂಸ್ಕೃತಿ ಉಳಿಯುತ್ತದೆ, ನಮ್ಮ ಮುಂದಿನ ಪೀಳಿಗೆಗೆ ಜನಪದ ಉಳಿಯಬೇಕು. ಜನಪದ ಹಸಿರಾಗಲಿ, ಜನಪದ ಉಸಿರಾಗಲಿ, ಜನಪದರ ಬದುಕು ನಮಗೆ ಆದರ್ಶವಾಗಲಿ ಎಂದು ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರಿನ ಸದಸ್ಯ ಡಾ. ಜೀವನ್ ಸಾಬ್ ವಾಲಿಕರ್ ಬಿನ್ನಾಳ್ ಹೇಳಿದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ- 48ರಲ್ಲಿ ‘ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಅನಿಲ್ ಕುಮಾರ್ ಜೈನ್, ಸಿ.ಇ.ಒ ಹಾಗೂ ಪ್ರಾಂಶುಪಾಲರು ದಿನೇಶ್ ಎಂ ಕೊಡವೂರು, ಉಪಪ್ರಾಂಶುಪಾಲರಾದ ಸಾಹಿತ್ಯ ಉಪಸ್ಥಿತರಿದ್ದರು. ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಗಾನ್ವಿಕಾ ಪ್ರಾರ್ಥಿಸಿ, ಆಂಗ್ಲಭಾಷಾ ವಿಭಾಗದ ಉಪನ್ಯಾಸಕಿ ದರ್ಶಿನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




By
ForthFocus™