ಉಡುಪಿ, ಮೇ 16: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಸುಮಾರು ಒಂದುವರೆ ವರ್ಷದಿಂದ ನಡೆಯುತ್ತಿದ್ದು, ಕಾಮಗಾರಿ ಅಂತಿಮ ಹಂತ ತಲುಪುತ್ತಿದ್ದು ಅಧಿಕಾರಿಗಳೊಂದಿಗೆ ಮೇಲ್ಸೇತುವೆ ಕಾಮಗಾರಿ ಪ್ರಗತಿಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ಅಂಬಲಪಾಡಿಯಲ್ಲಿ ವಾಹನ ದಟ್ಟಣೆಯ ಒತ್ತಡದಿಂದ ಮತ್ತು ಟ್ರಾಫಿಕ್ ಗಳ ಸಮಸ್ಯೆಯಿಂದ ಅಫಘಾತಗಳು ಸೇರಿದಂತೆ ಟ್ರಾಫಿಕ್ ಜಾಮ್ ಆಗುವ ಸಮಸ್ಯೆ ನಿರಂತರವಾಗಿದ್ದು, ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾದರೆ ವಾಹನ ದಟ್ಟಣೆಯ ಸಮಸ್ಯೆ ಬಹುತೇಕ ನಿಯಂತ್ರಣಕ್ಕೆ ಬರುತ್ತದೆ.
ಮೇ ಅಂತ್ಯದ ಒಳಗೆ ಮೇಲ್ಸೇತುವೆ ಪ್ರಥಮ ಹಂತದ ಕಾಮಗಾರಿ ಮುಗಿಸುವ ಪ್ರಯತ್ನ ಮಾಡುತ್ತಿದ್ದರೂ ತಾಂತ್ರಿಕ ಕಾರಣದಿಂದ ಜೂನ್ ಮೊದಲ ವಾರದಲ್ಲಿ ಮೇಲ್ಸೇತುವೆಯ ಒಂದು ಭಾಗ ವಾಹನ ಮುಕ್ತ ಮಾಡಲಾಗುವುದು.
ಕ್ಷೇತ್ರದ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ನಾವು ಹಾಗೂ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ. ಇಂದ್ರಾಳಿ, ಸಂತೆಕಟ್ಟೆ, ಕಟಪಾಡಿ, ಅಂಬಲಪಾಡಿ ಸೇರಿದಂತೆ ಎಲ್ಲಾ ಕಾಮಗಾರಿಗಳಿಗೂ ವೇಗ ಕೊಡುವ ಕೆಲಸ ಆಗಿದೆ. ಕಾಲಕಾಲಕ್ಕೆ ನಮ್ಮ ಗಮನ ಸೆಳೆಯುವ ಸಾರ್ವಜನಿಕರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.




By
ForthFocus™